ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ ನಟ ದರ್ಶನ್

ಮಂಡ್ಯ, ಏ.1- ಇದುವರೆಗೂ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಇದೀಗ ಪ್ರಚಾರದ ರಂಗು ಪಡೆದುಕೊಂಡಿದೆ.

ಇಂದು ಚಾಲೆಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಸೇರಿದಂತೆ ವಿವಿಧೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಭರ್ಜರಿ ರೋಡ್‍ಶೋ ನಡೆಸಿ ಪ್ರಚಾರ ಮಾಡಿದರು.

ಯಾವುದೇ ಕಾರಣಕ್ಕೂ ಮತದಾರರು ಗೊಂದಲಕ್ಕೀಡಾಗಬಾರದು. ಸುಮಲತಾ ಎ. ಕ್ರಮ ಸಂಖ್ಯೆ 20 ಇದಕ್ಕೆ ಮತದಾನ ಮಾಡುವ ಮೂಲಕ ಅಕ್ಕ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ದರ್ಶನ್ ಪ್ರಚಾರದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.ಎಲ್ಲೆಲ್ಲೂ ಸುಮಲತಾ ಹಾಗೂ ದರ್ಶನ ಪರ ಘೋಷಣೆಗಳು ಮೊಳಗಿದವು.

ಯಾರೂ ಆಮಿಷಗಳಿಗೆ ಒಳಗಾಗಬಾರದು, ಪ್ರಾಮಾಣಿಕವಾಗಿ ಮತದಾನ ಮಾಡಬೇಕು.ಅರ್ಹರನ್ನು ಆರಿಸಬೇಕು.ತಮ್ಮದೇ ಮತದಾನ ಮಾಡಿ ಹಕ್ಕು ಚಲಾಯಿಸಿ ಎಂದು ದಚ್ಚು ಇದೇ ವೇಳೆ ಸಲಹೆ ನೀಡಿದರು.

ಯಾರ್ಯಾರೋ ಏನೇನೋ ಮಾತನಾಡುತ್ತಾರೆ.ಅದಕ್ಕೆಲ್ಲಾ ಮತದಾರರು ತಲೆಕೆಡಿಸಿಕೊಳ್ಳಬಾರದು. ಕ್ಷೇತ್ರದಲ್ಲಿ ಸುಮಲತಾ ಹೆಸರಿನ ಕೆಲವರು ಸ್ಪರ್ಧಿಸಿದ್ದಾರೆ.

ಹಾಗಾಗಿ ಗೊಂದಲ ಮಾಡಿಕೊಳ್ಳದೆ ಸುಮಲತಾ ಎ. ಕ್ರಮ ಸಂಖ್ಯೆ 20ಕ್ಕೆ ನಿಮ್ಮ ಮತ ನೀಡಿ ನ್ಯಾಯವನ್ನು ಎತ್ತಿಹಿಡಿಯಬೇಕೆಂದು ದರ್ಶನ್ ಇದೇ ವೇಳೆ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ