ಸಂಜೆಯೊಳಗೆ ಗೋವಾ ನೂತನ ಸಿಎಂ ಪ್ರಮಾಣ ವಚನ

ಪಣಜಿ: ಮನೋಹರ್​ ಪರಿಕ್ಕರ್​ ಅವರ ನಿಧನದಿಂದ ತೆರವಾಗಿರುವ ಗೋವಾ ಸಿಎಂ ಹುದ್ದೆಗೆ ಇಂದು ಸಂಜೆ ವೇಳೆಗೆ ನೂತನ ಮುಖ್ಯಮಂತ್ರಿ ಪ್ರಮಾನ ವಚನ ಸ್ವೀಕರಿಸಲಿದ್ದಾರೆ ಎಂದು ಗೋವಾದ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್​ ತೆಂಡುಲ್ಕರ್​ ತಿಳಿಸಿದ್ದಾರೆ.

ಕೇಂದ್ರ ಸಚಿವ ನಿತಿನ್​ ಗಡ್ಕರಿ ಮತ್ತು ಬಿಜೆಪಿ ಹಿರಿಯ ನಾಯಕರು ಸಭೆ ನಡೆಸಿದ್ದು, ನೂತನ ಮುಖ್ಯಮಂತ್ರಿ ಆಯ್ಕೆ ಬಹುತೇಕ ಅಂತಿಮಗೊಳಿಸಿದ್ದಾರೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಘೋಷಿಸಲಿದ್ದಾರೆ. ನೂತನ ಮುಖ್ಯಮಂತ್ರಿ ಇಂದು ಸಂಜೆಯೊಳಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತೆಂಡುಲ್ಕರ್​ ತಿಳಿಸಿದರು.

ಗೋವಾ ವಿಧಾನಸಭೆ ಸ್ಪೀಕರ್​ ಪ್ರಮೋದ್​ ಸಾವಂತ್​, ಸುದಿನ್​ ಧಾವಲೀಕರ್​ ಮತ್ತು ವಿಶ್ವಜೀತ್​ ರಾಣೆ ಅವರು ಮುಖ್ಯಮಂತ್ರಿ ರೇಸ್​ನಲ್ಲಿದ್ಧಾರೆ. ಪ್ರಮೋದ್​ ಸಾವಂತ್​ ನೂತನ ಸಿಎಂ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಗೋವಾ ಕಾಂಗ್ರೆಸ್​ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್​ ಜತೆಗೆ 14 ಶಾಸಕರಿದ್ದು ನಮಗೆ ಬಹುಮತವಿದೆ ಎಂದು ಕಾಂಗ್ರೆಸ್​ ನಾಯಕರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ