ಸುಮಲತಾ ಬೆನ್ನಿಗೆ ನಿಂತ ಚಾಲೆಂಜಿಂಗ್​ ಸ್ಟಾರ್​ ದರ್ಶನ್​; ಅಂಬರೀಷ್​​ ಧರ್ಮಪತ್ನಿಗೆ ಸಿಕ್ತು ಆನೆಬಲ

ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್​​ ಹೆಂಡತಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕಾಂಗ್ರೆಸ್​​ನಿಂದ ಅವರಿಗೆ ಟಿಕೆಟ್​ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಗೊಂದಲಕ್ಕೆ ಈವರೆಗೆ ತೆರೆ ಬಿದ್ದಿಲ್ಲ. ಈ ನಡುವೆಯೂ ಅವರು ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಈಗ ಸುಮಲತಾ ಬೆನ್ನಿಗೆ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ನಿಂತಿದ್ದಾರೆ.

ಸುಮಲತಾ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದಾಗಲೇ ಎಲ್ಲರ ದೃಷ್ಟಿ ಸ್ಯಾಂಡಲ್​ವುಡ್​ ಮೇಲೆ ನೆಟ್ಟಿತ್ತು. ಅಂಬರೀಷ್​​ ಕನ್ನಡ ಚಿತ್ರರಂಗದಿಂದ ರಾಜಕೀಯಕ್ಕೆ ಕಾಲಿಟ್ಟವರು. ಅವರು ಅಜಾತ ಶತ್ರುವಿನಂತಿದ್ದರು. ದರ್ಶನ್​, ಯಶ್​, ಸುದೀಪ್​ ಸೇರಿ ಕನ್ನಡ ಚಿತ್ರರಂಗದ ಖ್ಯಾತ ನಟರು ಅಂಬರೀಷ್​ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಹಾಗಾಗಿ, ಸುಮಲತಾ ಚುನಾವಣೆಗೆ ನಿಲ್ಲುತ್ತಾರೆ ಎಂದಾಗ ಚಿತ್ರರಂಗ ಅವರ ಬೆನ್ನಿಗೆ ನಿಲ್ಲಲಿದೆ ಎಂದು ರಾಜಕೀಯ ತಜ್ಞರ ಭವಿಷ್ಯ ನುಡಿದಿದ್ದರು.

ಈಗ ಅದು ನಿಜವಾಗಿದೆ. ದರ್ಶನ್​ ಸುಮಲತಾಗೆ ಬೆಂಬಲ ನೀಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಅಂಬರೀಷ್​ ಅವರು ಮಂಡ್ಯದಿಂದ ಕಣಕ್ಕೆ ನಿಂತಾಗ ಪ್ರಚಾರಕ್ಕೆ ಹೋಗಿದ್ದೆ ಎಂದಿರುವ ಅವರು, “ಅಪ್ಪಾಜಿಯವರು ಚುನಾವಣೆಗೆ ನಿಂತಾಗ ನಾನು ಅವರ ಬೆಂಬಲಕ್ಕೆ ನಿಂತಿದ್ದೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಸುಮಲತಾ ಪರ ಪ್ರಚಾರ ನಡೆಸುವುದು ನನ್ನ ಕರ್ತವ್ಯ. ನನ್ನ ಆಪ್ತರು ಎನಿಸಿದವರಿಗೆ ಪ್ರಚಾರ ಮಾಡಿಕೊಟ್ಟಿದ್ದೇನೆ. ಅದೇ ರೀತಿ ಸುಮಲತಾ ಅವರು ಕರೆದರೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ,” ಎನ್ನುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ದರ್ಶನ್​ ಅವರ ಬೆಂಬಲ ಸಿಕ್ಕಿರುವುದು ಸುಮಲತಾಗೆ ಆನೆಬಲ ಸಿಕ್ಕಂತಾಗಿದೆ. ಸುಮಲತಾಗೆ ಮಂಡ್ಯದಿಂದ ಕಾಂಗ್ರೆಸ್​​ ಟಿಕೆಟ್​ ಸಿಕ್ಕರೆ ಅದು ಸಿದ್ದರಾಮಯ್ಯ ಅವರಿಂದ ಎನ್ನುವ ಮಾತಿತ್ತು. ಆದರೆ, ಸಿದ್ದರಾಮಯ್ಯ ಅವರೇ ಸುಮಲತಾಗೆ ಟಿಕೆಟ್​ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದರು. ಇದು ಎಲ್ಲರಲ್ಲೂ ಅಚ್ಚರಿಯನ್ನೂ ಮೂಡಿಸಿತ್ತು. ಒಂದೊಮ್ಮೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಗದಿದ್ದರೆ ಅವರು ಪಕ್ಷೇತರರಾಗಿ ನಿಲ್ಲುವ ಆಲೋಚನೆಯಲ್ಲಿದ್ದಾರೆ. ಆ ಸಂದರ್ಭದಲ್ಲಿ ದರ್ಶನ್​ ಸುಮಲತಾ ಪರ ಪ್ರಚಾರ ನಡೆಸಿದರೆ ಒಂದಷ್ಟು ಮತಗಳು ಸುಮಲತಾ ತೆಕ್ಕೆಗೆ ಬೀಳಲಿವೆ.

ವಿಧಾನಸಭಾ ಚುನಾವಣೆ ವೇಳೆ ‘ರಾಕಿಂಗ್​ ಸ್ಟಾರ್​’ ಯಶ್​ ಸಾಕಷ್ಟು ರಾಜಕೀಯ ನಾಯಕರ ಪರ ಪ್ರಚಾರ ನಡೆಸಿದ್ದರು. ಈ ಬಾರಿಯೂ ಅವರು ಸುಮಲತಾ ಬೆಂಬಲಕ್ಕೆ ನಿಲ್ಲಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರೇ ತಮ್ಮ ನಿಲುವನ್ನು ಹೇಳಿಕೊಳ್ಳಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ