ಭಾರತದ ಮೇಲೆ ದಾಳಿ ನಡೆಸಲು ಪಾಕ್​ ಜೈಶ್ ಉಗ್ರರ ಸಹಾಯ ಪಡೆದಿತ್ತು: ಪರ್ವೇಜ್​ ಮುಷರಫ್

ನವದೆಹಲಿ: ಉಗ್ರರನ್ನು ಪೋಷಿಸುತ್ತಾ, ತೋರ್ಪಡಿಕೆಗೆ ಶಾಂತಿಮಂತ್ರ ಪಠಿಸುವ ಪಾಕಿಸ್ತಾನದ ನಿಜವಾದ ಮುಖವನ್ನು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ತೆರೆದಿಟ್ಟಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆ ಭಾರತದ ಮೇಲೆ ದಾಳಿ ನಡೆಸಲು ಜೈಷ್​-ಎ-ಮೊಹ್ಮದ್​​ ಉಗ್ರ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದ ಪತ್ರಕರ್ತನೋರ್ವ ದೂರವಾಣಿ ಕರೆ ಮೂಲಕ ನಡೆಸಿದ ಸಂದರ್ಶನದನದ ವೇಳೆ ಮುಷರಫ್​ ಈ ಹೇಳಿಕೆ ನೀಡಿದ್ದಾರೆ. “ಜೆಇಎಮ್​ ಒಂದು ಉಗ್ರ ಸಂಘಟನೆ. ನನ್ನ ಆಡಳಿತದ ಅವಧಿಯಲ್ಲಿ ದೇಶದ ಗುಪ್ತಚರ ಇಲಾಖೆ ಭಾರತದ ಮೇಲೆ ದಾಳಿಗಳನ್ನು ನಡೆಸಲು ಈ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು.

ಈಗ ಜೆಇಎಮ್​ ವಿರುದ್ಧ ತೆಗೆದುಕೊಂಡ ಕ್ರಮಗಳು ನಿಜಕ್ಕೂ ಸ್ವಾಗತಾರ್ಹ,” ಎಂದಿದ್ದಾರೆ ಮುಷರಫ್​.

1999-2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಮುಷರಫ್​ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿತ್ತಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ಅಂದಿನ ಪರಿಸ್ಥಿತಿ ಬೆರೆಯೇ ಇತ್ತು. ಭಾರತ-ಪಾಕಿಸ್ತಾನ ಒಬ್ಬರ ಮೇಲೋಬ್ಬರು ರಹಸ್ಯವಾಗಿ ದಾಳಿ ನಡೆಸುತ್ತಿದ್ದರು.

ದೇಶದ ಗುಪ್ತಚರ ಇಲಾಖೆ ಇದರಲ್ಲಿ ಪಾಲ್ಗೊಳ್ಳುತ್ತಿತ್ತು,” ಎಂದಿದ್ದಾರೆ.

2003ರ ಡಿಸೆಂಬರ್​ನಲ್ಲಿ ನನ್ನನ್ನು ಹತ್ಯೆ ಮಾಡಲು ಈ ಸಂಘಟನೆ ಪ್ರಯತ್ನಿಸಿತ್ತು ಎಂದು ಅವರು ಆರೋಪಿಸಿದ್ದಾರೆ. ಈಗ ಸಂಘಟನೆ ವಿರುದ್ಧ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವು ರಾಷ್ಟ್ರಗಳು ಜೆಇಎಮ್​ ವಿರುದ್ಧ ನಿಂತಿದ್ದಾರೆ. ಈ ಕ್ರಮ ಸ್ವಾಗತಾರ್ಹ ಎನಿಸಿದರೂ ತೃಪ್ತಿ ನೀಡಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಪುಲ್ವಾಮಾದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ 40 ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಜೆಇಎಮ್​ ಹೊತ್ತಿದೆ. ಆದರೆ, ಈ ಆರೋಪವನ್ನು ಪಾಕ್​ ತಳ್ಳಿ ಹಾಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ