ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಜೈಷ್ ನಾಯಕರ ಆಕ್ರೋಶ

ಇಸ್ಲಾಮಾಬಾದ್: ಭಾರತ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತನ್ನವರನ್ನೇ ಅಪಾಯಕ್ಕೆ ಸಿಲುಕಿಸಲು ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಜೈಷ್​ ಎ ಮೊಹಮ್ಮದ್​ ಸಂಘಟನೆಯ ಕೆಲ ಪ್ರಮುಖ ಉಗ್ರರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕ್​ ಮೇಲೆ ದಾಳಿ ಮಾಡಿದ ಭಾರತೀಯ ಯೋಧನನ್ನು ಬಿಟ್ಟು ಕಳುಹಿಸಲು ಪ್ರಧಾನಿ ಇಮ್ರಾನ್​ ಖಾನ್​ ಸಮ್ಮತಿಸಿದರು. ಈಗ ಧಾರ್ಮಿಕ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಶತ್ರುವಿನ ವಿಷಯದಲ್ಲಿ ಮೃದುಧೋರಣೆ ಅನುಸರಿಸುತ್ತಿರುವ ಅವರು, ತಮ್ಮವರ ಬಗ್ಗೆ ಕಠಿಣ ನಿಲುವು ತೆಳೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಇಮ್ರಾನ್​ ಖಾನ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮೆರಿಕದ ವಿಶ್ವ ವಾಣಿಜ್ಯ ಸಂಘಟನೆಯ ಅವಳಿ ಕಟ್ಟಡಗಳ ಮೇಲೆ 9/11ರಂದು ನಡೆದ ದಾಳಿಯ ನಂತರದಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್​ ಮುಷರ್ರಫ್​ ಪಾಕಿಸ್ತಾನದಲ್ಲಿದ್ದ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಅನುಸರಿಸಿದ್ದರು. ಇದೀಗ ಪ್ರಧಾನಿ ಇಮ್ರಾನ್​ ಖಾನ್​ ಕೂಡ ಪರ್ವೆಜ್​ ಮುಷರ್ರಫ್​ ಅವರಂತೆ ಭಯೋತ್ಪಾದನೆ ಸಂಘಟನೆಗಳನ್ನು ನಿಗ್ರಹಿಸುವ ದಮನಕಾರಿ ನೀತಿಗಳನ್ನು ಅನುಸರಿಸಲಾರಂಭಿಸಿದ್ದಾರೆ ಎಂದು ಜೈಷ್​ ಆರೋಪಿಸಿದೆ.

ಐಎಎಫ್​ ದಾಳಿ ನಡೆದಿದ್ದು ನಿಜ: ಬಾಲಾಕೋಟ್​ನ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಯೋಧರು ದಾಳಿ ಮಾಡಿದ್ದು ನಿಜ. ದಾಳಿಯಲ್ಲಿ ಅವರು ಇಸ್ರೇಲ್​ ನಿರ್ಮಿತ ನಿರ್ದೇಶಿಸಬಹುದಾದ ಕ್ಷಿಪಣಿಗಳನ್ನು ಬಳಸಿದ್ದರು. ಆದರೆ, ಅದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಜೈಷ್​ ಉಗ್ರರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ