ಮೈಸೂರು, ಮಾ.3- ನೂತನ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದ ಸಲುವಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪ್ರಿಪರೇಟರಿ ಪರೀಕ್ಷೆಯನ್ನೇ ಮುಂದೂಡಿ ಆಡಳಿತ ಮಂಡಳಿ ಮಾಡಿದ ಎಡವಟ್ಟಿಗೆ ಸಾವಿರಾರು ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವಂತಾಗಿದೆ.
ನಂಜನಗೂಡು ತಾಲೂಕಿನ ತಗಡೂರು, ವರಕೂಡು, ಹುರಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಏಕಲವ್ಯ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಅಟಲ್ಬಿಹಾರಿ ವಸತಿ ಶಾಲೆಯ ಎಸ್ಎಸ್ಎಲ್ಸಿ ಮಕ್ಕಳು ನಿನ್ನೆ ಹಿಂದಿ ವಿಷಯದ ಪ್ರಿಪರೇಟರಿ ಬರೆಯದಂತಾಗಿದೆ.
ಮುಳ್ಳೂರಿನ ಮೊರಾರ್ಜಿ ದೇಸಾಯಿ ಮಾದರಿ ಶಾಲೆಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದರಿಂದ ಆಡಳಿತ ಮಂಡಳಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪ್ರಿಪರೇಟರಿ ಪರೀಕ್ಷೆಯನ್ನೇ ಮುಂದೂಡಿತ್ತು.
ಹಿಂದಿ ಪರೀಕ್ಷೆ ಬರೆಯಲು ತಯಾರಾಗಿ ಬಂದಿದ್ದ ವಿದ್ಯಾರ್ಥಿಗಳು ಗೊಂದಲಕ್ಕೀಡಾದರು. ಈ ವಿಷಯ ಅರಿತ ಶಾಸಕ ಹರ್ಷವರ್ಧನ್ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಪರೀಕ್ಷೆ ಮುಂದೂಡಿದ್ದರಿಂದ ತೊಂದರೆಗೆ ಸಿಲುಕಿದ ಮಕ್ಕಳಿಗೆ ಧೈರ್ಯ ತುಂಬಿದರು.
ಎಸ್ಎಸ್ಎಲ್ಸಿ ಬೋರ್ಡ್ನಿಂದ ಅನುಮತಿ ಪಡೆಯದೆ ಪರೀಕ್ಷೆ ಮುಂದೂಡಿರುವ ಶಾಲಾ ಆಡಳಿತ ಮಂಡಳಿ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ.