ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ: ವಾಘಾ ಗಡಿಯಲ್ಲಿ ಸಂಭ್ರಮ

ವಾಘಾ: ವಿಂಗ್ ಕಮ್ಯಾಂಡರ್​ ಅಭಿನಂದನ್​ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆಗೊಳಿಸಿದ್ದು, ಭಾರತಕ್ಕೆ ಮರಳಲಿದ್ದಾರೆ. ವೀರ ಯೋಧನ ಮರಳುವಿಕೆ ಹಿನ್ನಲೆಯಲ್ಲಿ ವಾಘಾ ಗಡಿಯಲ್ಲಿ ಸಂಭ್ರಮ ಮನೆಮಾಡಿದೆ.

ಇಂದು ಅತ್ತಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿಲಿರುವ ಅಭಿನಂದನ್​ರನ್ನು ಸ್ವಾಗತಿಸಲು ಬೆಳಗ್ಗೆಯಿಂದಲೇ ಜನ ಸೇರಿದ್ದಾರೆ. ಭಾರತದ ಧ್ವಜ, ಅಭಿನಂದನ್​ ಭಾವಚಿತ್ರ ಹಿಡಿದ ಭಾರತೀಯರು ’ಜೈ ಹೋ ‘ ಎಂದು ಕೂಗಿ ಸಂಭ್ರಮಿಸುತ್ತಿದ್ದಾರೆ. ಮಗನನ್ನು ಸ್ವಾಗತಿಸಲು ಅಭಿನಂದನ್​ ಪೋಷಕರು ಸಹ ವಾಘಾ ಗಡಿಯತ್ತ ದಾವಿಸಿದ್ದಾರೆ. ಅಭಿನಂದನ್ ಸ್ವಾಗತಕ್ಕೆ ಅವಕಾಶ ಕೋರಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ಅಭಿನಂದನ್ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾಕಿಸ್ತಾನ ಅಭಿನಂದನ್ ಅವರನ್ನು ಇಸ್ಲಾಮಾ ಬಾದ್ ನಿಂದ ಲಾಹೋರ್ ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅಭಿನಂದನ್‍ರನ್ನು ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಅವರಿಗೆ ಪಾಕ್ ಒಪ್ಪಿಸಲಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಅಭಿನಂದನ್‍ರನ್ನು ಬಂಧಮುಕ್ತವಾಗಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಜೈಷೆ ಉಗ್ರ ನಡೆಸಿ ಭಯಾನಕ ದಾಳಿಯಲ್ಲಿ 45ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ, ಪಾಕ್​ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ, ಜೈಷೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಇದರಿಂದ ಕೋಪಗೊಂಡ ಪಾಕ್​ ತನ್ನ ವಾಯುಪಡೆಯ ವಿಮಾನವನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಯತ್ನಿಸಿತ್ತು. ಆದರೆ ಭಾರತದ ವಾಯುಪಡೆ, ಪಾಕ್​ನ ವಿಮಾನವನ್ನು ಹೊಡೆದುರುಳಿಸುವಲ್ಲಿ ಯಶ್ವಸ್ವಿಯಾಗಿತ್ತು.

ಆದರೆ, ಆ ಸಮಯದಲ್ಲಿ ವಿಂಗ್​ ಕಮ್ಯಾಂಡರ್​ ಅಭಿನಂದನ್​ ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಬಂಧಿಸಿದ ಪಾಕ್​, ತನ್ನ ವಶದಲ್ಲಿ ಇಟ್ಟುಕೊಂಡಿತ್ತು. ಅವರ ವಿಡಿಯೋವನ್ನೂ ಬಿಡುಗಡೆ ಮಾಡಿತ್ತು. ಜೀನೇವಾ ಒಪ್ಪಂದದಂತೆ ಅಭಿನಂದನ್​ರನ್ನು ಬಂಧಿಸಿದ್ದು ತಪ್ಪು, ಕೂಡಲೇ ಅವರನ್ನು ಭಾರತಕ್ಕೆ ವಾಪಸ್​ ಕಳುಹಿಸಬೇಕು ಎಂದು ಭಾರತ ವಿಶ್ವಮಟ್ಟದಲ್ಲಿ ಒತ್ತಡ ಹಾಕಿತು. ಇದಕ್ಕೆ ಮಣಿದ ಪಾಕ್ ಅಭಿನಂದನ್​ರನ್ನು ಇಂದು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದೆ. ಅವರ ಬರುವಿಕೆಗಾಗಿ ಇಡೀ ದೇಶವೇ ಕಾಯುತ್ತಿದೆ.

People Gather at Wagah Border to Welcome Abhinandan Varthaman

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ