ಹಾರೆಯಿಂದ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು-ಲಕ್ಷಾಂತರ ರೂ. ಮೌಲ್ಯದ ಚಿನ್ನಭಾರಣ ದರೋಡೆ

ನೆಲಮಂಗಲ,ಫೆ.25- ಹಾರೆಯಿಂದ ಮನೆಯೊಂದರ ಬಾಗಿಲು ಮೀಟಿ ಒಳನುಗ್ಗಿದ ಚೋರರು ನಗದು ಸೇರಿದಂತೆ 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹರಿಶಿಣಗುಂಟೆ ಗ್ರಾಮದ ಆದರ್ಶನಗರದಲ್ಲಿ ಗುರುಮೂರ್ತಿ ಎಂಬುವರು ವಾಸವಾಗಿದ್ದು, ಫೆ.23ರಂದು ಕಾರ್ಯ ನಿಮಿತ್ತ ಕುಟುಂಬ ಸದಸ್ಯರೊಂದಿಗೆ ಸೋಲೂರು ಬಳಿಯಲ್ಲಿನ ಫಾರಂಹೌಸ್‍ಗೆ ಹೋಗಿದ್ದರು.

ಈ ಸಮಯವನ್ನೇ ಕಾದಿದ್ದ ಚೋರರು ನಿನ್ನೆ ಬೆಳಗಿನ ಜಾವ 3.30ರ ಸಮಯದಲ್ಲಿ ಮನೆಯ ಮುಂಬಾಗಿಲು ಮೀಟಿ ಒಳನುಗ್ಗಿ ಬೀರುವನ್ನು ಒಡೆದು ಕೈಗೆ ಸಿಕ್ಕ 1.60 ಲಕ್ಷ ನಗದು ಹಾಗೂ 2 ಲಕ್ಷ ಬೆಲೆಯ ಚಿನ್ನದ ಸರಗಳು, ವಜ್ರದ ಓಲೆಯನ್ನು ಕದ್ದು 5 ಗಂಟೆ ಸುಮಾರಿನಲ್ಲಿ ಪರಾರಿಯಾಗಿದ್ದಾರೆ.

ನಿನ್ನೆ ಬೆಳಗ್ಗೆ 6.30ರ ಸಮಯದಲ್ಲಿ ಗುರುಮೂರ್ತಿ ಅವರ ಕಾರು ಚಾಲಕ ಮನೆ ಬಳಿ ಬಂದಾಗ ಮುಂಬಾಗಿಲು ತೆರೆದಿರುವುದನ್ನು ಗಮನಿಸಿ ತಕ್ಷಣ ಗುರುಮೂರ್ತಿ ಅವರಿಗೆ ತಿಳಿಸಿದ್ದಾರೆ.

ಫಾರಂಹೌಸ್‍ನಿಂದ ಗುರುಮೂರ್ತಿ ಮನೆಗೆ ಹಿಂದಿರುಗಿ ಬಂದು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆ ಪೊಲೀಸರು, ಶ್ವಾನದಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಕಳ್ಳತನ ದೃಶ್ಯವನ್ನು ಆಧರಿಸಿ ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ