ನಿರುದ್ಯೋಗ ನಿವಾರಣೆಯ ಉದ್ದೇಶದಿಂದ 9 ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆ: ಸಿ.ಎಂ.ಕುಮಾರಸ್ವಾಮಿ

ಹಾಸನ ಫೆ.19- ಸರ್ಕಾರ ರೈತರ ಹಿತದೃಷ್ಟಿಯ ಜೊತೆಗೆ ನಿರುದ್ಯೋಗ ನಿವಾರಣೆಯ ಉದ್ದೇಶದಿಂದ ರಾಜ್ಯದ 9 ಜಿಲ್ಲೆಗಳಲ್ಲಿ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ನಿಗಮ ನಿಯಮಿತ ಇವರ ವತಿಯಿಂದ ಆಯೋಜಿಸಲಾಗಿದ್ದ ರೈತರ ಸಾಲಮನ್ನಾ ತೀರುವಳಿ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು ರೈತರಿಗೆ ಆತ್ಮಸ್ಥೆರ್ಯವನ್ನು ತುಂಬುವ ಉದ್ದೇಶದಿಂದ ಸಾಲಮನ್ನಾ ಯೋಜನೆ ಜಾರಿಗೆ ತರಲಾಗಿದ್ದು ಎರಡೆ ಕಂತುಗಳಲ್ಲಿ ಸಾಲಮನ್ನಾ ಪೂರ್ಣಗೊಳಿಸಲಾಗುವುದು ಎಂದರು.

ನಾಡಿನ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿ ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ ಸೇರಿದಂತೆ ಇತೆರೆ ಜಿಲ್ಲೆಗಳಲ್ಲಿ ಕಾರ್ಖಾನೆಗಳಿಗೆ ಚಾಲನೆ ನೀಡಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಹಾಂಗ್‍ಕಾಂಗ್‍ನ ಕೈಗಾರಿಕೋದ್ಯಮ ಕ್ಲಸ್ಟರ್‍ನ ಉದ್ಘಾಟಿಸಲಾಗಿದೆ ಅಲ್ಲಿ 10,000 ಮಂದಿಗೆ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು.

ಬಳ್ಳಾರಿಯಲ್ಲಿ 25-30 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿಸಲು ಹಲವು ವಸ್ತ್ರೋದ್ಯಮ ಕಾರ್ಖಾನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

3-4 ವರ್ಷಗಳಿಂದ ಬರಗಾಲದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಹಿತಕಾಯಲು ಸಾಲಮನ್ನಾ ಮಾಡಲಾಗಿದೆ ಅದರೆ ಇದು ಕೃಷಿಕರಿಗೆ ಆ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನಿಡಿ ಹಲವು ಯೋಜನೆ ರೂಪಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಪ್ರವಾಸ ಕ್ಷೇತ್ರಕ್ಕೆ ಹೆಚ್ಚಿನ ಯಾತ್ರಿಕರನ್ನು ಅಥವಾ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಉದ್ಯೋಗ ನಿರ್ಮಾಣ ವಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯ ಅಭಿವೃದ್ದಿಯ ಜೊತೆಗೆ ನಾಡಿನ ಜನತೆಯ ಋಣವನ್ನು ತೀರಿಸಬೇಕು, ರಾಜ್ಯದ ಸರ್ವತೋಮುಖ ಪ್ರಗತಿ ನಮ್ಮ ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಾಜಿ ಪ್ರಧಾನ ಹೆಚ್.ಡಿ.ದೇವೇಗೌಡ ಅವರು ಮಾತನಾಡಿ ರೈತರು ಈ ನಾಡಿನ ಬೆನ್ನೆಲುಬು ಅವರಿಗೆ ಶಕ್ತಿ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ.ರೇವಣ್ಣ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿವರಿಸಿದರು. ಹೊಸ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಆದ್ಯತೆಗಳ ಬಗ್ಗೆ ತಿಳಿಸಿದರು.

ಫೆ.23-24 ರಂದು ನಗರದಲ್ಲಿ ಉದ್ಯೋಗ ವೇಳ ಆಯೋಜಿಸಲಾಗಿದೆ ಅಲ್ಲದೆ ವಿವಿಧ ತಾಲ್ಲೂಕುಗಳಿಗೆ ಮುಖ್ಯಮಂತ್ರಿಯವರು ಆಗಮಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಸಹಕಾರ ಸಚಿವರಾದ ಬಂಡೆಂಪ್ಪ ಕಾಶಂಪುರ್, ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡ, ಪ್ರವಸೋದ್ಯಮ ಸಚಿವರಾದ ಸಾ.ರಾ ಮಹೇಶ್, ಸಣ್ಣ ನೀರಾವರಿ ಸಚಿವರಾದ ಪುಟ್ಟಸ್ವಾಮಿ, ದಕ್ಷಿಣ ವಲಯ ಐ.ಜಿ.ಪಿ ಶರತ್‍ಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಸಂಸಧೀಯ ಕಾರ್ಯದರ್ಶಿಗಳಾದ ಎಂ.ಎ. ಗೋಪಾಲಸ್ವಾಮಿ, ಶಾಸಕರಾದ ಎ.ಟಿ. ರಾಮಸ್ವಾಮಿ, ಹೆಚ್.ಕೆ. ಕುಮಾರಸ್ವಾಮಿ, ಕೆ.ಎಮ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ