40 ಯೋಧರನ್ನು ಬಲಿ ತೆಗೆದುಕೊಂಡ ಉಗ್ರರ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ

ಜಮ್ಮು, ಫೆ.17- ಪುಲ್ವಾಮಾದಲ್ಲಿ 40ಯೋಧರನ್ನು ಬಲಿ ತೆಗೆದುಕೊಂಡ ಉಗ್ರರ ವಿರುದ್ಧ ಭಾರತಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದೇ ವೇಳೆ ಜಮ್ಮುವಿನ ಗಡಿನಿಯಂತ್ರಣ ರೇಖೆ(ಎಲ್‍ಒಸಿ)ಮತ್ತು ಅಂತರರಾಷ್ಟ್ರೀಯ ಗಡಿ(ಐಡಿ)ಯಲ್ಲಿ ಭಾರೀ ಸಂಖ್ಯೆಯ ಭಾರತದ ಯೋಧರು ಜಮಾವಣೆಗೊಂಡಿದ್ದಾರೆ. ಇದರಿಂದ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಆಶ್ರಯ ಪಡೆದಿರುವ ಅನೇಕ ಉಗ್ರರರು ದಾಳಿ ಸಾಧ್ಯತೆಗೆ ಹೆದರಿ ಪರಾರಿಯಾಗಿದ್ದಾರೆ.

ಯೋಧರ ಮಾರಣಹೋಮದ ನಂತರ ಭಾರತೀಯ ಸೇನೆ ತಮಗೆ ತಕ್ಕಪಾಠ ಕಲಿಸುತ್ತಾರೆ ಎಂದು ಹೆದರಿ ಕಂಗಾಲಾಗಿರುವ ಉಗ್ರರು ಭಾರತ-ಪಾಕ್ ಗಡಿಯಿಂದ ಜಾಗ ಖಾಲಿ ಮಾಡಿದ್ದಾರೆ. ಪಿಒಕೆ ಒಳಪ್ರದೇಶದ ಸುರಕ್ಷಿತ ಸ್ಥಳದಲ್ಲಿ ಪಾಕ್ ಬೆಂಬಲಿತ ಉಗ್ರರು ಅಡಗಿಕುಳಿತ್ತಿದ್ದಾರೆ ಎಂದು ಉನ್ನತ ಮೂಲಕ ತಿಳಿಸಿವೆ.

ತನಿಖೆ ಚುರುಕು: ಈ ಮಧ್ಯೆ ಜಮ್ಮುನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತು ರಾಷ್ಟ್ರೀಯ ಭದ್ರತಾದಳ (ಎನ್‍ಎಸ್‍ಜಿ) ಅಧಿಕಾರಿಗಳು ವಿಧ್ವಂಸಕ ದಾಳಿಯ ತನಿಖೆಯನ್ನು ತೀವ್ರಗೊಳಿಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕುವ ಕಾರ್ಯ ಮುಂದುವರೆಸಿದ್ದಾರೆ.

ಸಿಆರ್‍ಪಿಎಫ್ ಯೋಧರಿದ್ದ ಬಸ್ ಮೇಲೆ ಕೆಂಪು ಬಣ್ಣದ ಮಾರುತಿ ಇಕೋ ವಾಹನ ಅಪ್ಪಳಿಸಿ ಬಾಂಬ್ ಸ್ಪೋಟ ನಡೆಸಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿನ ಅವಶೇಷಗಳನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಮಧ್ಯೆ ಜಮ್ಮುವಿನಲ್ಲಿ ಇಂದು ಕೂಡ ಕಫ್ರ್ಯೂ ಮುಂದುವರೆಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಕಣ್ಗಾವಲು ಬಿಗಿಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ