ನಾಳೆ ನಡೆಯಬೇಕಿದ್ದ ಜೆಡಿಎಸ್‍ನ ಪರಿಶಿಷ್ಟ ಜಾತಿ ಸಮಾವೇಶ ಮುಂದೂಡಿಕೆ

ಬೆಂಗಳೂರು, ಫೆ.9-ನಾಳೆ ವಿಜಯಪುರದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಸಮಾವೇಶವನ್ನು ಮುಂದೂಡಲಾಗಿದೆ.

ಮಾಜಿಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ನವದೆಹಲಿಯಲ್ಲಿರುವ ಹಿನ್ನೆಲೆಯಲ್ಲಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಆದರೆ ರಾಜ್ಯದಲ್ಲಿ ಆಪರೇಷನ ಕಮಲ ಚಟುವಟಿಕೆಗಳು ನಡೆಯುತ್ತಿವೆ. ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿವೆ. ಜೆಡಿಎಸ್ ಶಾಸಕರನ್ನ ಸೆಳೆಯುವ ಪ್ರಯತ್ನವನ್ನು ಕೂಡ ನಡೆಸಲಾಗಿದೆ.

ಈ ಎಲ್ಲಾ ಬೆಳವಣಿಗೆಯ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ನಿಗಾ ಇಟ್ಟಿದ್ದಾರೆ.ಕ್ಷಣಕ್ಷಣದ ರಾಜಕೀಯದ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಜೆಡಿಎಸ್ ಶಾಸಕರ ಪುತ್ರನೊಂದಿಗೆ ಆಪರೇಷ್‍ನ ಕಮಲಕ್ಕೆ ಸಂಬಂಧಿಸಿದ ಆಡಿಯೋ ಒಂದನ್ನ ಬಿಡುಗಡೆ ಮಾಡಿದ್ದರು.

ಬಜೆಟ್ ಮಂಡಿಸಿದ ನಂತರವು ಹಲವು ಶಾಸಕರು ಕ್ಷೇತ್ರಾನುದಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜೆಡಿಎಸ್‍ಗೆ ನಿಗಮ ಮಂಡಳಿಗಳು ಇನ್ನೂ ದೊರೆಯದಿರುವ ಬಗ್ಗೆ ಹಲವು ಅತೃಪ್ತರು ಈ ಸಂದರ್ಭದಲ್ಲಿ ಸಮಾವೇಶ ನಡೆಸುವುದು ಸೂಕ್ತವಲ್ಲವೆಂದು ಹೇಳಿರುವುದರಿಂದ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ