ವಿವಿಐಪಿ ಹೆಲಿಕಾಪ್ಟರ್‌ ಹಗರಣ: ದುಬೈನಿಂದ ದೆಹಲಿಗೆ ಆರೋಪಿ ರಾಜೀವ್‌ ಸಕ್ಸೇನಾ

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಧ್ಯವರ್ತಿ ರಾಜೀವ್‌ ಸಕ್ಸೇನಾ ಅವರನ್ನು ಯುಎಇ ಸರ್ಕಾರ ಬುಧವಾರ ಭಾರತಕ್ಕೆ ಹಸ್ತಾಂತರಿಸಿದೆ. ತನಿಖಾ ಸಂಸ್ಥೆಗಳು ಸಕ್ಸೇನಾ ಅವರನ್ನು ಬುಧವಾರ ತಡರಾತ್ರಿ ದುಬೈನಿಂದ ದೆಹಲಿಗೆ  ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನಿ ಲಾಂಡರಿಂಗ್ ಗೆ ಸಂಬಂಧಿಸಿದ ತನಿಖೆಗಾಗಿ ಸಕ್ಸೇನಾ ಅವರನ್ನು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಗೆ ವಹಿಸಬಹುದೆಂದು ನಿರೀಕ್ಷಿಸಲಾಗಿದೆ.

ಕಳೆದ ವರ್ಷ ದುಬೈನಿಂದ ಭಾರತಕ್ಕೆ ಜೇಮ್ಸ್ ಮಿಷೆಲ್‌:
ಈ ಪ್ರಕರಣದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಕಾಪ್ಟರ್‌ ಹಗರಣದ ಪ್ರಧಾನ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ರನ್ನು ದುಬೈನಿಂದ ಕರೆತರಲಾಯಿತು. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶಿವಾನಿ ಸಕ್ಸೇನಾ ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

ರಾಜೀವ್‌ ಸಕ್ಸೇನಾ, ಆತನ ಪತ್ನಿ ಶಿವಾನಿ ಸಕ್ಸೇನಾ ಹಾಗೂ ಅವರಿಗೆ ಸೇರಿದ ದುಬೈ ಮೂಲದ ಸಂಸ್ಥೆಗಳ ಮೂಲಕ ಹಲವು ಅಪರಾಧಗಳನ್ನು ನಡೆಸಲಾಗಿದೆ ಎಂದು ಇಡಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇಡಿ ಸಕ್ಸೇನಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ