ನಾಳೆ ಕೇಂದ್ರ ಮಧ್ಯಂತರ ಬಜೆಟ್‌: ಇಂದಿನಿಂದ 13 ದಿನ ಸಂಸತ್​​ ಅಧಿವೇಶನ

ನವದೆಹಲಿಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್​​ ಇಂದಿನಿಂದಲೇ ಶುರುವಾಗಲಿದೆ. ಕೇಂದ್ರದ ಕೊನೆಯ ಬಜೆಟ್​​​ ಅಧಿವೇಶನ ಇದಾಗಿದ್ದು, ಫೆಬ್ರವರಿ 13 ರವರೆಗೂ ನಡೆಯಲಿದೆ. ಸರ್ಕಾರ ಪೂರ್ಣ ಪ್ರಮಾಣದ ಬಜೆಟ್​​ ಮಂಡಿಸಲಿದೆ ಎಂದು ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಖುದ್ದು ಕೇಂದ್ರ ಹಣಕಾಸು ಸಚಿವಾಲಯವೇ ಸ್ಪಷ್ಟನೆ ನೀಡಿದ್ದು, ಕೊನೆಯ ಮತ್ತು ಮಧ್ಯಂತರ ಬಿಜೆಟ್​​ ಎಂದು ಘೋಷಿಸಿದೆ. ಅಲ್ಲದೇ ಕೇಂದ್ರ ಹಣಕಾಸು ಖಾತೆಯ ಹೊಣೆ ಹೊತ್ತ ಪಿಯೂಷ್‌ ಗೋಯಲ್‌ ಈ ಬಜೆಟ್​​ ಮಂಡಿಸಲಿದ್ದಾರೆ. ಜತೆಗೆ ಕಡೆಯ ಬಜೆಟ್​ ಎಂಬ ಕಾರಣಕ್ಕೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಈ ಅಧಿವೇಶನ ಮಹತ್ವದ್ದಾಗಿದೆ.

ಕೇಂದ್ರ ಪೂರ್ಣ ಪ್ರಮಾಣದ ಬಜೆಟ್​​​ ಮಂಡಿಸಲಾಗುತ್ತಿದೆ ಎಂಬ ವದಂತಿ ಹರಿದಾಡುತ್ತಿತ್ತು. ಬಳಿಕ ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಹಣಕಾಸು ಸಚಿವಾಲಯ ಇದು “2019-20ನೇ ಸಾಲಿನ ಮಧ್ಯಾಂತರ ಬಜೆಟ್‌ ಎಂದು ಘೋಷಿಸಿತು. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಪಿಯೂಷ್ ಗೋಯೆಲ್, ಫೆಬ್ರವರಿ 1 ರಂದು ಬಜೆಟ್ ಮಂಡಿಸುತ್ತಿರುವುದಾಗಿ ತಿಳಿಸಿದ್ದರು. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 1 ರಂದು ಆಯವ್ಯಯ ಮಂಡನೆಯಾಗಲಿದೆ ಎಂದು ಗೊಂದಲಕ್ಕೆ ತೆರೆ ಎಳೆದರು.

ಇನ್ನು ಇಂದಿನಿಂದ ಆರಂಭವಾಗುವ ಜಂಟಿ ಅಧಿವೇಶನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಈ ಮಧ್ಯಂತರ ಬಜೆಟ್​ನಲ್ಲಿ ಮೋದಿ ಸರ್ಕಾರ ನೌಕರರಿಗೆ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆಯಿದೆ. ಆದಾಯ ತೆರಿಗೆ ಮಿತಿ ದ್ವಿಗುಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗುತಿದೆ.  ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಮಿತಿಯನ್ನು ಸರ್ಕಾರ 5 ಲಕ್ಷ ರೂ. ಗೆ ಅಧಿಕಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಪೂರ್ಣ ಪ್ರಮಾಣದ ಬಜೆಟ್‌: ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಯೋಜನೆಯ ಮಾರ್ಗಸೂಚಿಯನ್ನೇ ಪೂರ್ಣ ಪ್ರಮಾಣದ ಬಜೆಟ್ ಎಂದು ಕರೆಯಲಾಗುತ್ತದೆ​​. ಇಲ್ಲಿ ಹೇಗೆ? ಯಾವ ಮೂಲದಿಂದ ಆದಾಯ ಬರುತ್ತದೆ?; ಅದನ್ನು ಯಾವ ಕ್ಷೇತ್ರಕ್ಕೆ ವಿನಿಯೋಗ ಮಾಡಬೇಕು ಎಂಬುದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲದೇ ಹೊಸ ತೆರಿಗೆ ಪ್ರಸ್ತಾಪ, ನೂತನ ಯೋಜನೆಗಳ ಘೋಷಿಸಲಾಗುತ್ತದೆ.

ಮಧ್ಯಂತರ ಬಜೆಟ್‌: ಅವಧಿ ಪೂರೈಸುವ ಮುನ್ನ ಯಾವುದೇ ಸರ್ಕಾರವಾಗಿರಲಿ ಮುಂದಿನ ನಾಲ್ಕು ತಿಂಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಅದರಲ್ಲಿ ಯಾವುದೇ ಹೊಸ ತೆರಿಗೆ ಮತ್ತು ಹೊಸ ಘೋಷಣೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ. ವೇತನ ಪಾವತಿ ಸೇರಿದಂತೆ ಯಾವುದೇ ಯೋಜನೆಗಳಿಗೆ ನೀಡಲಾಗುವ ವೆಚ್ಚದ ಪ್ರಮಾಣ ಮುಂದುವರಿಸಲು ಸಂಸತ್​​ ಅನುಮತಿ ಅಗತ್ಯವಾಗಿರುತ್ತದೆ. ಇದುವೇ ಕೇಂದ್ರದ ಮಧ್ಯಂತರ ಬಜೆಟ್​​ ಆಗಿರುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ