ಮೆಟ್ರೋ ಯೋಜನೆಯ 2ಎ ಹಂತಕ್ಕೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು, ಜ.29-ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್.ಪುರಂನ ಔಟರ್ ರಿಂಗ್ ರೋಡ್(ಹೊರ ವರ್ತಲ ರಸ್ತೆ-ಓಆರ್‍ಆರ್) ಮೆಟ್ರೋ ಮಾರ್ಗ (ಮೆಟ್ರೋ ಯೋಜನೆಯ 2ಎ ಹಂತ) ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬಿಎಂಆರ್‍ಸಿಎಲ್‍ನ ಈ ಯೋಜನೆಯನ್ನು 5,994.90 ಕೋಟಿ ರೂ.ಗಳ ಪರಿಷ್ಕøತ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.2023ರ ಡಿಸೆಂಬರ್ ಒಳಗೆ ಈ ಮಹತ್ವದ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಅವಧಿ ನಿಗದಿಗೊಳಿಸಿದೆ.

ಓಆರ್‍ಆರ್‍ಗಾಗಿ ಹಣಕಾಸು ಯೋಜನೆ ಮತ್ತು ಸಂಬಂಧಪಟ್ಟ ಇತರ ಪ್ರಮುಖ ಕಾರ್ಯಗಳಿಗೂ ರಾಜ್ಯ ಸರ್ಕಾರ ಅಂಗೀಕಾರ ನೀಡಿದೆ.

ಈ ಯೋಜನೆಗಾಗಿ ಕೇಂದ್ರ ಸರ್ಕಾರ 1.043.90 ಕೋಟಿ ರೂ.ಗಳನ್ನು ಹಾಗೂ ರಾಜ್ಯ ಸರ್ಕಾರ 1,819 ಕೋಟಿ ರೂ.ಗಳನ್ನು ನೀಡಲಿದ್ದು, ಉಳಿದ ಮೊತ್ತವನ್ನು ಅನುದಾನ, ಸಾಲ ಮತ್ತು ಅನ್ವೇಷಣಾತ್ಮಕ ಆರ್ಥಿಕ ನೆರವು ಮೂಲಕ ಪಡೆಯಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಮೆಟ್ರೋ ನೀತಿ-2017ರಲ್ಲಿ ರೂಪಿಸಲಾದ ಬಂಡವಾಳ ಹೂಡಿಕೆ ಪಾಲು ಜಂಟಿ ಸಹಭಾಗಿತ್ವದ ಅಡಿ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ಪಡೆಯಲಾಗುತ್ತದೆ. ಹಾಗೆಯೇ ಹಂತ-1 ಮತ್ತು ಹಂತ-2ರಲ್ಲಿ ನೆರವು ನೀಡಿದ್ದ ಕೇಂದ್ರ ಸರ್ಕಾರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದಲೂ ನೆರವು ಪಡೆಯಲಾಗುವುದು.

ಕೇಂದ್ರ ಸರ್ಕಾರದಿಂದ ಸಾಲದ ನೆರವು ಮೂಲಕ ಹಣಕಾಸು ಸೌಲಭ್ಯ ಪಡೆಯಲು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಅಭಿವೃದ್ದಿ ಸಂಸ್ಥೆಗಳ ಸಹಾಯವನ್ನು ಸಹ ಕೋರಲಾಗುತ್ತದೆ.

ಈ ಮಹತ್ವದ ಯೋಜನೆಗಾಗಿ ಭೂ ಸ್ವಾಧೀನ ಮತ್ತು ಈ ಮಾರ್ಗದಲ್ಲಿರುವ ವಸತಿ ಮತ್ತು ಇತರ ಕಟ್ಟಡಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು.

ಕೇಂದ್ರ ಸರ್ಕಾರದ ಅನುಮೋದನೆ ನಂತರ ಸಿವಿಲ್ ಕಾಮಗಾರಿಗಳು ಆರಂಭವಾಗಲಿದೆ ಹಾಗೂ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಣಕಾಸು ಸೌಲಭ್ಯಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗುವುದು.

ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಎದುರಾಗುವ ಅಡ್ಡಿಗಳನ್ನು ಸುಗಮ ಮತ್ತು ಕ್ಷಿಪ್ರವಾಗಿ ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮೆಟ್ರೋ ನೀತಿ-2017ರ ಅನ್ವಯ ಬಿಎಂಆರ್‍ಸಿಎಲ್ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಯೋಜನಾ ವರದಿ ಮತ್ತು ಇತರ ಅಗತ್ಯ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ಸಲ್ಲಿಸಲಿದೆ.ತ್ವರಿತ ಅನುಮೋದನೆಗಾಗಿ ಕೇಂದ್ರದೊಂದಿಗೆ ನಿಕಟ ಸಮನ್ವಯ ಹೊಂದಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ