ವಿನಾಕಾರಣ ಮೂಗು ತೂರಿಸಬೇಡಿ ಶಾಸಕ ರೇಣುಕಾಚಾರ್ಯಗೆ ಎಚ್ಚರಿಕೆ ನೀಡಿದ ಯಡಿಯೂರಪ್ಪ

ಬೆಂಗಳೂರು,ಜ.24-ಸಚಿವ ಸಾ.ರಾ.ಮಹೇಶ್ ಹಾಗೂ ಎಸ್ಪಿ ದಿವ್ಯಗೋಪಿನಾಥ್ ಮಧ್ಯೆ ನಡೆದ ವಾಗ್ವಾದದಲ್ಲಿ ಮೂಗು ತೂರಿಸಿದ ಬಿಜೆಪಿ ಶಾಸಕ ಎಸ್.ಪಿ.ರೇಣುಕಾಚಾರ್ಯಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕ್ರಿಯಾಸಮಾಧಿ ವೇಳೆ ಸಚಿವ ಸಾ.ರಾ.ಮಹೇಶ್ ಮತ್ತು ಎಸ್‍ಪಿ ದಿವ್ಯಗೋಪಿನಾಥ್ ವಾಗ್ವಾದ ನಡೆದಾಗ ಸಚಿವರು ಅವಾಜ್ ಹಾಕಿದ್ದರು.ಇದರಿಂದ ನೊಂದ ದಿವ್ಯ ಕಣ್ಣೀರು ಹಾಕಿದ್ದರು.

ಈ ಸಂದರ್ಭದಲ್ಲಿ ಎಂ.ಪಿ.ರೇಣುಕಾಚಾರ್ಯ ಎಸ್ಪಿ ಅವರನ್ನು ಸಮಾಧಾನಪಡಿಸಿದ್ದರು. ಈ ಕೆಲಸಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿ.ಎಸ್.ಯಡಿಯೂರಪ್ಪ ಇಬ್ಬರ ನಡುವೆ ಗಲಾಟೆ ನಡೆಯುವಾಗ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ನಿಮಗೆ ಅಲ್ಲಿ ಏನು ಕೆಲಸವಿತ್ತು?ನೀವೇಕೆ ಅವರಿಬ್ಬರ ಗಲಾಟೆಯಲ್ಲಿ ಭಾಗಿಯಾದ್ದೀರಿ?ಎಂದು ಪ್ರಶ್ನಿಸಿದ್ದಾರೆ.ಸಚಿವ ಸಾ.ರಾ.ಮಹೇಶ್‍ಗೆ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ತಿಳಿದಿಲ್ಲ. ಕೊಡಗು ಜಿಲ್ಲೆಯಲ್ಲಿ ಉಂಟಾದ ಭೀಕರ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಹೇಶ್ ಹೇಗೆ ನಡೆದುಕೊಂಡಿದ್ದರು ಎಂಬುದು ನಿಮಗೂ ಗೊತ್ತಿದೆ.ಅಂಥವರ ಪರ ನಿಂತಿರುವುದು ಸರಿಯೇ ಎಂದು ಕಿಡಿಕಾರಿದ್ದಾರೆ.

ಇನ್ನು ಮುಂದೆ ಯಾರ ವಿಚಾರದಲ್ಲೂ ಮೂಗು ತೂರಿಸುವ ಕೆಲಸ ಮಾಡಬೇಡಿ. ವಿನಾಕಾರಣ ಇಂಥ ಪ್ರಕರಣಗಳಲ್ಲಿ ಮಾಧ್ಯಮಗಳ ಮುಂದೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಅಥವಾ ಕಾಂಗ್ರೆಸ್ ನಾಯಕರ ಮಧ್ಯೆ ನಡೆಯುವ ಜಗಳಗಳಲ್ಲಿ ತಾವು ತಲೆ ಹಾಕುವುದು ಬೇಡ. ಸರ್ಕಾರದ ಅಂಗಗಳೆಂದೇ ಹೇಳಲಾಗುವ ಸಚಿವರು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗಬೇಕಿದೆ. ಮಧ್ಯೆ ತಲೆ ಹಾಕುವುದು ಬೇಡ ಎಂದು ಪಾಠ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ