ಪ್ರತಿಯೊಬ್ಬ ಲೇಖಕರಿಗೂ ಮತ್ತು ಚಿಂತಕರಿಗೂ ಜ್ಞಾನದ ಹಸಿವಿರಬೇಕು ; ಡಾ.ಸಿದ್ದಲಿಂಗಯ್ಯ

ಬೆಂಗಳೂರು,ಜ.24-ಪ್ರತಿಯೊಬ್ಬ ಲೇಖಕರಿಗೂ ಚಿಂತಕರಿಗೂ ಜ್ಞಾನದ ಹಸಿವು ಇರಬೇಕು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ತಿಳಿಸಿದರು.

ನಗರದ ನಯನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಢಿ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಯುವ ಬರಹಗಾರರ ಚೊಚ್ಚಲ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಅವರು ಮಾತನಾಡಿದರು.

ಯುವ ಲೇಖಕರು ಬರೆಯುತ್ತಾ ಹೋಗಬೇಕು.ಅವರಲ್ಲಿ ಹಿರಿಯ ಲೇಖಕರಿಗೆ ಹೋಲಿಕೆ ಮಾಡಿಕೊಂಡು ಅವರ ಮಟ್ಟಿಗೆ ನಾನು ಬರೆಯುತ್ತದ್ದೇನೆ ಎಂಬ ಮನೋಭಾವನೆ ಇರಬಾರದು ಎಂದು ಹೇಳಿದರು.

ಯುವಲೇಖಕರನ್ನು ಅನುವಾದಿತ ಕೃತಿಗಳು ಹಾಗೂ ಹಿರಿಯ ಸಾಹಿತಿಗಳ ಕೃತಿಗಳನ್ನು ಓದಿದ್ದೀರಾ ಎಂದು ಕೇಳಿದರೆ ಅವರು ಇಲ್ಲ ಎಂದು ನುಡಿಯುತ್ತಾರೆ ಇದು ವಿಷಾದನೀಯ ಎಂದು ವಿಷಾದಿಸಿದರು.

ಯುವ ಲೇಖಕರು ನಿಸರ್ಗದ ಪ್ರೀತಿಯ ಜೊತೆಗೆ ಸಮಾಜ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು.ರೈತರು , ಕಾರ್ಮಿಕರ ನೋವು ನಲಿವುಗಳನ್ನು ಕೃತಿಯ ರೂಪದಲ್ಲಿ ಹೊರತರಬೇಕು ಎಂದು ಸಲಹೆ ನೀಡಿದರು.

ಹಿರಿಯ ಲೇಖಕರ ಗುಣಗಳನ್ನು ಕಿರಿಯ ಲೇಖಕರು ಅಳವಡಿಸಿಕೊಂಡಾಗ ಮಾತ್ರ ಅವರು ಉತ್ತಮ ಕೃತಿಗಳನ್ನು ರಚಿಸಬಹುದು ಎಂದು ಯುವಲೇಖಕರಿಗೆ ಕಿವಿ ಮಾತು ಹೇಳಿದರು.

ಬಂಡಾಯಗಾರ ಕ್ರಾಂತಿಕಾರಿ ಸಾಹಿತಿಗಳಾಗಬೇಕೆಂದು ಕೆಲವರು ಹಂಬಲಿಸುತ್ತಾರೆ.ಆದರೆ ಯಾಕೆ ಬಂಡಾಯ ಸಾಹಿತಿಗಳಾಗಬೇಕೆಂಬುದುನ್ನು ಯುವ ಲೇಖಕರು ತಿಳಿಯಬೇಕು. ಸಮಾಜದಲ್ಲಿರುವ ಕ್ರೌರ್ಯ ತೊಲಗಿ ಸೋದರತೆಯ ಮನೋಭಾವನೆ ಮೂಡಿಸಲು ಲೇಖಕರು ಬಂಡಾಯ ಸಾಹಿತಿಗಳು ಮಾನವೀಯತೆ ವಿನಯ ವಿಧೇಯತೆ ಸುಸಂಸ್ಕೃತ ವರ್ತನೆ ಪ್ರದರ್ಶಿಸುವುದನ್ನು ಯುವ ಬಂಡಾಯ ಲೇಖಕರ ಕಲಿಯಬೇಕು ಎಂದು ತಿಳಿಸಿದರು.

ಪುಸ್ತಕಗಳು ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.ಆದ್ದರಿಂದ ಪ್ರತಿಯೊಂದು ಮನೆಯಲ್ಲಿಯೂ ಸಣ್ಣ ಗ್ರಂಥಾಲಯಗಳನ್ನು ತೆರೆಯುವುದರ ಮೂಲಕ ಪ್ರತಿಯೊಬ್ಬರು ಓದುವ ಹವ್ಯಾಸ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಧಿಕಾರ ಯುವ ಲೇಖಕರ 50 ಕೃತಿಗಳನ್ನು ಬಿಡುಗಡೆ ಗೊಳಿಸಿರುವುದು ಅಭಿನಂದನೆಗೆ ಪಾತ್ರವಾಗಿದೆ.ಪುಸ್ತಕ ಲೋಕಕನ್ನಡ ಲೋಕಕ್ಕೆ ಯುವ ಲೇಖಕರು ಅಡಿ ಇಡುತ್ತಿದ್ದಾರೆ ಅವರನ್ನು ತುಂಬು ಹೃದಯದಿಂದ ನಾನು ಸ್ವಾಗತಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ವಿಕ್ರಮ ವಿಸಾಜಿ ,ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ ಆಡಳಿತಾಧಿಕಾರಿ ಸೌಭಾಗ್ಯ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ