ಸುಪ್ರೀಂಕೋರ್ಟ್​​ನಲ್ಲಿ ಇಂದು ಅಯೋಧ್ಯೆ ಪ್ರಕರಣದ ಅರ್ಜಿ ವಿಚಾರಣೆ

ನವದೆಹಲಿ: ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ​​ ಅಯೋಧ್ಯಾ ರಾಮಜನ್ಮಭೂಮಿ ವಿವಾದ ಪ್ರಕರಣದ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಲಿದೆ. ಈ ವೇಳೆ ಮುಂದಿನ ವಿಚಾರಣೆ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.

ಜ.4ರಂದು ಒಂದೇ ನಿಮಿಷದಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ರಂಜನ್​ ಗೊಗೊಯಿ ನೇತೃತ್ವದ ಪೀಠ, “ಅಯೋಧ್ಯೆ ಪ್ರಕರಣದ ತನಿಖಾ ವಿಚಾರದಲ್ಲಿ     ಮುಂದಿನ ಆದೇಶವನ್ನು ಜನವರಿ  10 ರಂದು ನೀಡಲಾಗುವುದು” ಎಂದಿತ್ತು. ಅಲ್ಲದೆ, ಪ್ರಕರಣವನ್ನು ಹೊಸ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡುವುದಾಗಿ ಮಂಗಳವಾರ ತಿಳಿಸಿತ್ತು. ಈ ಹೊಸ ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್​, ಉದಯ್​ ಲಲಿತ್​, ಎಸ್​.ಎ ಬೊಬ್ಡೆ, ಎಸ್​.ವಿ. ರಮಣ್​ ಇದ್ದಾರೆ. ರಂಜನ್​ ಗೊಗೊಯಿ ಈ ಪೀಠದ ನೇತೃತ್ವ ವಹಿಸಿದ್ದಾರೆ.

ಸುನ್ನಿ ವಕ್ಫ್​​ ಬೋರ್ಡ್​​, ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ  ಟ್ರಸ್ಟ್​​ಗೆ ವಿವಾದಿತ ಪ್ರದೇಶದ 2.77 ಎಕರೆ ಜಾಗವನ್ನುಸಮಾನಾಗಿ ಹಂಚಿ ಅಲಹಾಬಾದ್​ ಹೈಕೋರ್ಟ್​​ 2010ರಲ್ಲಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ 14 ಅರ್ಜಿಗಳು ಸಲ್ಲಿಕೆ ಆಗಿದ್ದವು. ಇತ್ತೀಚಿಗೆ ಸಂದರ್ಶನದಲ್ಲಿ
ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಆದೇಶ ಬಂದ  ನಂತರ ಆ ಬಗ್ಗೆ ಚಿಂತನೆ ಮಾಡುವುದಾಗಿ ಹೇಳಿದರು. ಹೀಗಾಗಿ ಈ ವಿಚಾರಣೆ               ಮಹತ್ವ ಪಡೆದುಕೊಂಡಿದೆ. ಸದ್ಯ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹಿಂದು ಸಂಘಟನೆಗಳು  ಒತ್ತಡ ಹೇರುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ