ಮೈಸೂರಿನಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಮೈಸೂರು,ಜ.8-ಮೈಸೂರಿನಲ್ಲಿ ಭಾರತ್ ಬಂದ್‍ಗೆ ನೀರಸ  ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕೆಲವು ಪ್ರದೇಶಗಳಲ್ಲಿ  ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದ್ದು, ಸಾರಿಗೆ ಸಂಚಾರ ಎಂದಿನಂತಿದೆ.

ಬಸ್‍ಗಳು ಸಂಚರಿಸುತ್ತಿದ್ದರೂ ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಇಲ್ಲದೆ ಖಾಲಿಯಾಗೇ ಸಂಚರಿಸುತ್ತಿದುದು ಕಂಡುಬಂತು. ಮಾಲ್‍ಗಳು, ಅಂಗಡಿಮುಂಗಟ್ಟುಗಳು ಸಹ ಕೆಲಸ ನಿರ್ವಹಿಸುತ್ತಿವೆ.

3300 ಬಸ್‍ಗಳ ಪೈಕಿ ಶೇ.70ರಷ್ಟು ಬಸ್‍ಗಳು ಸಂಚರಿಸುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಕುವೆಂಪು ನಗರದ  ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಮುಂಗಡವಾಗಿ ಇಂದು ರಜೆ ಎಂದು ಬೋರ್ಡ್ ಹಾಕಿದ್ದರೂ ಸಹ ಒಳಗಡೆ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತ ಪರೀಕ್ಷೆ ನಡೆಸುತ್ತಿದುದು ಕಂಡುಬಂತು.
ಕೆಲ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ನಗರದ ವಿವಿಧೆಡೆ ರ್ಯಾಲಿ ನಡೆಸಿ ಬಂದ್‍ಗೆ ಬೆಂಬಲ ನೀಡಲು ಮನವಿ ಮಾಡುತ್ತಿದ್ದರು.

ಎಐಟಯುಸಿ ಸಂಘಟನೆ ಕಾರ್ಯಕರ್ತರು ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದ ರಾಮಸ್ವಾಮಿ  ವೃತ್ತದ ಬಳಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ನಿರತರೊಬ್ಬರು ಮೋದಿ ಭೂತ ಎಂದು ಬಿಂಬಿಸಿ ಮುಖಕ್ಕೆ ಬಣ್ಣ ಬಳಿದುಕೊಂಡು ಎಲ್ಲರ ಗಮನ ಸೆಳೆದರು.

ಮೈಸೂರು ಹೃದಯ ಭಾಗದಲ್ಲಿ ಕೆಲವು ಅಂಗಡಿಗಳು ಮುಚ್ಚಿದ್ದರೆ ಕೆಲವು ತೆರೆದಿದ್ದವು. ನಗರದಿಂದ ಹೊರ  ಊರುಗಳಿಗೆ ಹೋಗುವ ಬಸ್‍ಗಳು ಸಹ ಸಂಚರಿಸತ್ತಿದ್ದವು.

ಪ್ರತಿಭಟನೆ ಸಂಬಂಧ ಬಿಗಿ ಪೆÇಲೀಸ್ ಬಂದೋಬಸ್ ಮಾಡಲಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ನೌಕರರ ಸಂಖ್ಯೆ ಕಡಿಮೆ ಇದ್ದುದು ಕಂಡುಬಂತು. ಪೆಟ್ರೋಲ್ ಬಂಕ್‍ಗಳು ಎಂದಿನಂತೆ ತೆರೆದಿದ್ದವು.

ಚಿತ್ರಮಂದಿರಗಳು, ಮಾಲ್‍ಗಳು, ಹೋಟೆಲ್‍ಗಳು ತೆರೆದಿದ್ದರೂ ಬಂದ್ ಹಿನ್ನೆಲೆಯಲ್ಲಿ ಜನಸಂಖ್ಯೆ ವಿರಳವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ