ಬೆಂಗಳೂರು, ಜ.1- ರೈತರ ಹಿತ ಕಾಯಬೇಕಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಗನ ಸಿನಿಮಾ ಶೂಟಿಂಗ್ ವೀಕ್ಷಿಸಲು ಫ್ರಾನ್ಸ್ಗೆ ಹೋಗಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ಸಿಂಗಪುರ್ನಲ್ಲಿ ಹೊಸ ವರ್ಷಾಚರಣೆ ಆಚರಿಸಿಲ್ಲ. ಫ್ರಾನ್ಸ್ನಲ್ಲಿ ಮಗನ ಸಿನಿಮಾ ಶೂಟಿಂಗ್ ಹಾಗೂ ಹೊಸ ವರ್ಷಾಚರಣೆ ನಡೆಸುತ್ತಿದ್ದಾರೆ. ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅಧಿಕಾರಸ್ಥರು ವಿದೇಶಕ್ಕೆ ತೆರಳಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ರೈತರ ಹಿತ ಕಾಯಬೇಕಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕರು ವರ್ಷಾಚರಣೆಗೆ ವಿದೇಶದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.