ಚಳಿಗಾಲದ ಆಧಿವೇಶನಕ್ಕೆ ತೆರೆ ಬೀಳುತ್ತಿದ್ದಂತೆ ಬೆಂಗಳೂರಿನತ್ತ ಮುಖ ಮಾಡಿದ ಆಡಳಿತ ಶಕ್ತಿ ಕೇಂದ್ರ

ಬೆಳಗಾವಿ, ಡಿ.21-ಕಳೆದ 10 ದಿನಗಳಿಂದ ನಡೆದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ತೆರೆ ಬೀಳುತ್ತಿದ್ದಂತೆ ಆಡಳಿತದ ಶಕ್ತಿ ಕೇಂದ್ರ ರಾಜಧಾನಿ ಬೆಂಗಳೂರಿನತ್ತ ಮುಖ ಮಾಡಿತು.

ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಗೊಂಡಿದ್ದ ಆಡಳಿತದ ಶಕ್ತಿ ಕೇಂದ್ರ ಮತ್ತೆ ಇಂದು ರಾಜಧಾನಿಯತ್ತ ಮರಳುತ್ತಿದೆ.

ಕಳೆದ ಎರಡು ವಾರಗಳಿಂದಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದ ಸಚಿವರು, ಶಾಸಕರು, ಸರ್ಕಾರದ ಮುಖ್ಯಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಬೆಳಗಾವಿಯಲ್ಲೇ ಬೀಡು ಬಿಟ್ಟಿದ್ದರು.

ಸಚಿವ ಸಂಪುಟ ಸಭೆ, ಸಚಿವಸಂಪುಟ ಉಪಸಮಿತಿ ಸಭೆ, ವಿವಿಧ ಇಲಾಖಾವಾರು ಸಭೆಗಳು ಕೂಡ ಸುವರ್ಣಸೌಧದಲ್ಲೇ ನಡೆದವು.ಸರ್ಕಾರದ ದೈನಂದಿನ ಕೆಲಸ ಕಾರ್ಯಗಳು ಕೂಡ ಸುವರ್ಣಸೌಧದಲ್ಲೇ ನಡೆಯುತ್ತಿದ್ದವು.

ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಸುವರ್ಣಸೌಧದಲ್ಲಿ ಪ್ರತ್ಯೇಕ ಕಚೇರಿಗಳನ್ನು ಕೂಡ ಒದಗಿಸಲಾಗಿತ್ತು. ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರ ಭೇಟಿ ಸೇರಿದಂತೆ ಸರ್ಕಾರದ ಬಹುತೇಕ ಕೆಲಸ ಕಾರ್ಯಗಳು ಇಲ್ಲಿಂದಲೇ ನಡೆಯುತ್ತಿದ್ದವು.

ಚಳಿಗಾಲದ 10 ದಿನಗಳ ಅಧಿವೇಶನಕ್ಕೆ ಇಂದು ತೆರೆ ಬೀಳುತ್ತಿದ್ದಂತೆಯೇ ಸಚಿವರು, ಶಾಸಕರು ಬೆಂಗಳೂರು ಹಾಗೂ ತಮ್ಮ ತಮ್ಮ ಕ್ಷೇತ್ರಗಳ ಕಡೆ ಪ್ರಯಾಣ ಬೆಳೆಸಿದರು.

ಬಹಳಷ್ಟು ಶಾಸಕರು ನಿನ್ನೆಯೇ ತೆರಳಿದ್ದರು.ಸರ್ಕಾರದ ಪ್ರಮುಖ ಅಧಿಕಾರಿಗಳು, ವಿವಿಧ ಇಲಾಖೆ ಹಾಗೂ ಸಚಿವಾಲಯದ ಸಿಬ್ಬಂದಿ ಅಧಿವೇಶನ ಮುಗಿಯುತ್ತಿದ್ದಂತೆಯೇ ಬೆಂಗಳೂರಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಕಳೆದ ಎರಡು ವಾರಗಳಿಂದ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಸುವರ್ಣಸೌಧ, ಅಧಿವೇಶನ ಮುಗಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳನ್ನು ಹೊರತು ಪಡಿಸಿ ಉಳಿದವರೆಲ್ಲಾ ನಿರ್ಗಮಿಸತೊಡಗಿದರು. ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ ಪೆÇಲೀಸರ ಸರ್ಪಗಾವಲನ್ನು ಹಾಕಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ