ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲ ಹಿನ್ನಲೆ, 409 ಟ್ಯಾಂಕರ್ ಮೂಲಕ 209 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಸಚಿವ ಕೃಷ್ಣ ಭೈರೇಗೌಡ

ಬೆಳಗಾವಿ (ಸುವರ್ಣಸೌಧ), ಡಿ.19- ರಾಜ್ಯದಲ್ಲಿ 209 ಗ್ರಾಮಗಳಿಗೆ 409 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್‍ವೆಲ್‍ಗಳನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದರು.

ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲದಿಂದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತಿತರ ಶಾಸಕರು ನಡೆಸಿದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವರು, ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದರೆ ಮಾಸಿಕ 6ಸಾವಿರದಿಂದ 17 ಸಾವಿರವರೆಗೂ ನೀರಿನ ಲಭ್ಯತೆ ಆಧಾರದ ಮೇಲೆ ಬಾಡಿಗೆ ನೀಡಬಹುದು. ಟ್ಯಾಂಕರ್‍ನಿಂದ ನೀರು ಸರಬರಾಜು ಮಾಡುವ ಮತ್ತು ಬೋರ್‍ವೆಲ್ ಬಾಡಿಗೆ ಹಣವನ್ನು ಸರ್ಕಾರವೇ ಭರಿಸಲಿದೆ. ಈಗಾಗಲೇ 382 ರೈತರ ಬೋರ್‍ವೆಲ್‍ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದರು.

ಯಾವುದೇ ಜನವಸತಿ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಾದ ಎರಡು ದಿನಗಳಲ್ಲಿ ಟ್ಯಾಂಕರ್ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಬಾಡಿಗೆ ಪಡೆಯುವ ಬೋರ್‍ವೆಲ್‍ಗಳಿಗೆ ವಿದ್ಯುತ್ ಶುಲ್ಕ ಸಮಸ್ಯೆ ಎದುರಾದರೆ ವಿದ್ಯುತ್ ಕಂಪೆನಿಗಳ ಜತೆ ಸಮಾಲೋಚಿಸಿ ಪರಿಹರಿಸುವ ಭರವಸೆ ನೀಡಿದರು.

ಒಂದು ಕೋಟಿ ಅನುದಾನ:
ಟ್ಯಾಂಕರ್ ಬಳಕೆ ಹಾಗೂ ಬೋರ್‍ವೆಲ್‍ಗೆ ಬಾಡಿಗೆ ನಿಗದಿ ಪಡಿಸುವ ಅಧಿಕಾರವನ್ನು ತಹಸೀಲ್ದಾರ್, ತಾಪಂ ಇಒಗಳಿಗೆ ನೀಡಲಾಗಿದೆ. ಅನಿವಾರ್ಯವಾದ ಕಡೆಗಳಲ್ಲಿ ಟಾಸ್ಕ್‍ಪೆÇೀರ್ಸ್‍ವತಿಯಿಂದ ಬೋರ್‍ವೆಲ್ ಕೊರೆಸಬಹುದು.ಬರಪೀಡಿತ ನೂರು ತಾಲ್ಲೂಕುಗಳಿಗೆ ಎರಡು ಕಂತಿನಲ್ಲಿ ತಲಾ ಒಂದು ಕೋಟಿ ರೂ.ಅನುದಾನವನ್ನು ಕುಡಿಯುವ ನೀರಿಗಾಗಿ ನೀಡಲಾಗಿದೆ.ಈ ಹಣವನ್ನು ಬೋರ್‍ವೆಲ್ ಕೊರೆಯುವುದು, ಪೈಪ್‍ಲೈನ್ ಮತ್ತು ಮೋಟರ್ ಅಳವಡಿಕೆಗೆ ಬಳಸಬಹುದಾಗಿದೆ. ಹಳೆಯ ತಾಲ್ಲೂಕುಗಳ ಪ್ರಕಾರ ಹಣ ನೀಡಲಾಗಿದೆ. ಬರವಿಲ್ಲದ ತಾಲ್ಲೂಕುಗಳಿಗೂ ತಲಾ 25 ಲಕ್ಷ ರೂ.ಅನುದಾನವನ್ನು ಟಾಸ್ಕ್‍ಪೆÇೀರ್ಸ್‍ಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡಿದ ವೆಚ್ಚ ಮತ್ತು ಬೋರ್‍ವೆಲ್‍ಗಳ ಬಾಡಿಗೆ ಹಣವನ್ನು 15 ದಿನಗಳಿಗೊಮ್ಮೆ ಸಲ್ಲಿಸಬೇಕು. ವಿಳಂಬವಾಗದಂತೆ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಡಿಯುವ ನೀರಿಗೆ 1700 ಕೋಟಿ:
ಜಿಪಂ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ 1700 ಕೋಟಿ ರೂ. ನೀಡಲಾಗಿದೆ.ಜಿಪಂಗಳಲ್ಲಿ ಆರಂಭಿಕವಾಗಿ 670ಕೋಟಿ ರೂ. ಹಣವಿತ್ತು. ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಖಾಸಗಿ ಬೋರ್‍ವೆಲ್ ಕೊರೆಸಲು ನಿಬಂಧನೆಗಳಿದ್ದು, ಕುಡಿಯುವ ನೀರಿಗಾಗಿ ಬೋರ್‍ವೆಲ್ ಕೊರೆಸಲು ಯಾವುದೇ ಅಡ್ಡಿಯಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿನ್ಯಾಸದಲ್ಲಿ ಲೋಪವಿದ್ದು, ಅವುಗಳನ್ನು ಒಂದೊಂದಾಗಿ ಜಲಧಾರೆ ಯೋಜನೆಯಡಿ ತರಲಾಗುವುದು.ಸುಮಾರು 60ಸಾವಿರ ಕೋಟಿ ರೂ.ವೆಚ್ಚದಲ್ಲಿ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಪಂ ಮತ್ತು ಜಿಲ್ಲಾ ಮಟ್ಟದಲ್ಲಿ ಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದರು.

ಬರವಿಲ್ಲದ ತಾಲ್ಲೂಕುಗಳಲ್ಲೂ ಕೂಡ ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆಗೆ ಪಡೆಯಲು ಕಂದಾಯ ಸಚಿವರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಶಾಸಕ ಗೋವಿಂದಕಾರಜೋಳ ಅವರು ಹೊಸ ತಾಲ್ಲೂಕಿಗೂ ಕುಡಿಯುವ ನೀರಿಗಾಗಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಮಾಧುಸ್ವಾಮಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಹೊಸದಾಗಿ ನರೇಗಾ ಯೋಜನೆಯಡಿ ಕೂಲಿಕಾರರನ್ನು ನೋಂದಣಿ ಮಾಡಲು ಅವಕಾಶವಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ