ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನಲೆ, 624 ಮೇವು ಬ್ಯಾಂಕ್ ಮತ್ತು 297 ಗೋಶಾಲೆಗಳನ್ನು ತೆರೆಯಲು ಪ್ರಸ್ತಾವೆನೆ, ಸಚಿವ ವೆಂಕಟರಾವ್ ನಾಡಗೌಡ

ಬೆಳಗಾವಿ (ಸುವರ್ಣಸೌಧ), ಡಿ.19-ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 624 ಮೇವು ಬ್ಯಾಂಕ್‍ಗಳನ್ನು ಹಾಗೂ 297 ಗೋಶಾಲೆಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಅಂಗೀಕಾರ ಸಿಕ್ಕರೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಉತ್ತರ ನೀಡಿದ ಅವರು, 1.29 ಕೋಟಿ ಜಾನುವಾರುಗಳಿಗೆ 4.5 ಲಕ್ಷ ಮೆಟ್ರಿಕ್ ಟನ್ ಮೇವಿನ ಅಗತ್ಯವಿದೆ.ಮೇವು ಸಂಗ್ರಹಕ್ಕೆ ಗೋಶಾಲೆ ಆರಂಭ ಸೇರಿದಂತೆ 296.11 ಕೋಟಿ ರೂ.ಗಳಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.ಅದು ಅಂಗೀಕಾರಗೊಂಡ ಬಳಿಕ ಕೆಲಸ ಪ್ರಾರಂಭಿಸಲಾಗುವುದು ಎಂದರು.

ಯಾದಗಿರಿಯಲ್ಲಿ 150 ಟನ್, ರಾಯಚೂರಿನಲ್ಲಿ 200-300 ಟನ್ ಮೇವು ದಾಸ್ತಾನಿದೆ.ಕೋಲಾರ, ಬೆಳಗಾವಿ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ರೈತರಿಂದ ಮೇವು ಖರೀದಿಸಿ ಬಂಡಲ್ ಮಾಡಿ ದಾಸ್ತಾನು ನೀಡಲು ಟೆಂಡರ್ ಕರೆಯಲಾಗಿದೆ.ಭತ್ತ ಬೆಳೆಯುವ ಪ್ರದೇಶಗಳಲ್ಲಿ ಮೇವನ್ನು ಬ್ಲಾಕ್ (ಹೊರೆಕಟ್ಟಿ) ಸಂಗ್ರಹಿಸಿಡಲಾಗುವುದು.ಇದರಿಂದ ಸಾಗಾಣಿಕೆಗೂ ಸುಲಭವಾಗಲಿದೆ. ಈಗಾಗಲೇ ರಾಜ್ಯಾದ್ಯಂತ 8,11,191 ಮೇವು ಬೀಜದ ಮಿನಿ ಕಿಟ್‍ಗಳನ್ನು ವಿತರಿಸಲಾಗಿದೆ. ಇದರಿಂದ ಸುಮಾರು 30 ಲಕ್ಷ ಹಸಿರು ಮೇವು ಉತ್ಪಾದನೆ ನಿರೀಕ್ಷೆ ಇದ್ದು, ನವೆಂಬರ್‍ನಿಂದ ಮಾರ್ಚ್‍ವರೆಗೂ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ.ಮೇವು ಬೆಳೆಯುವ ಸಲುವಾಗಿ 20.66 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದರು.

ನ.23ರಿಂದ ಹೊರರಾಜ್ಯಗಳಿಗೆ ಮೇವು ಸಾಗಣೆ ನಿಷೇಧಿಸಲಾಗಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಎಲ್ಲಿಯೂ ಗೋಶಾಲೆ ತೆರೆಯುವ ಸ್ಥಿತಿ ನಿರ್ಮಾಣವಾಗಿಲ್ಲ. ಅಂತಹ ಸ್ಥಿತಿ ಕಂಡುಬಂದರೆ ಗೋಶಾಲೆ ತೆರೆಯಲು ಕ್ರಮ ವಹಿಸಲಾಗುವುದು.ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ತವರು ಜಿಲ್ಲೆಯಲ್ಲಿ ಮೇವು ಲಭ್ಯವಿಲ್ಲದಿದ್ದರೆ ನೆರೆ ಜಿಲ್ಲೆಯಿಂದ ಮೇವು ಖರೀದಿಸುವಂತೆ ತಾಕೀತು ಮಾಡಲಾಗಿದೆ.ಪ್ರತಿ ಶನಿವಾರ ಬರ ಪರಿಸ್ಥಿತಿ ಬಗ್ಗೆ ವರದಿ ಪಡೆಯಲಾಗುತ್ತಿದೆ.ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.

ಕೆಎಂಎಫ್ ಸಹಯೋಗದಲ್ಲಿ ಮೇವು ಬೆಳೆಯುವ ಯೋಜನೆಯನ್ವಯ ಕೋಲಾರದಲ್ಲಿ ಪ್ರಾಯೋಗಿಕವಾಗಿ ಮೇವು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ.ಅದೇ ಮಾದರಿಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಿ ಕೆಎಂಎಫ್ ಸಹಯೋಗದಲ್ಲಿ ಮೇವು ಬೆಳೆಯಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ