ಮೊದಲು ಪ್ರಸ್ನೋತ್ತರ ಕಲಾಪ ನಂತರ ವಿಷಯ ಪ್ರಸ್ತಾಪ, ಸಭಾಪತಿ ಬಸವರಾಜ್ ಹೊರಟ್ಟಿ

ಬೆಳಗಾವಿ,ಡಿ.11- ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಮಂಡಿಸಿದ ನಿಲುವಳಿ ಸೂಚಿಯನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿರಸ್ಕರಿಸಿದ್ದರಿಂದ ಕೆಲಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗ್ಗೆ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಹೊರಟ್ಟಿ ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದಾಗ ಕೋಟಾ ಶ್ರೀನಿವಾಸ ಪೂಜಾರಿ ಅವರು ನಿಯಮ 68ರಡಿ ಬರಗಾಲದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿದರು.

ರಾಜ್ಯದ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಭೀಕರ ಬರಗಾಲವಿದೆ. ಜನರಿಗೆ ಕುಡಿಯಲು ನೀರು, ಜಾನುವಾರುಗಳಿಗೆ ಮೇವು, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಗುಳೇ ಹೋಗುತ್ತಿದ್ದಾರೆ. ಸರ್ಕಾರದ ಗಮನಸೆಳೆಯುವ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೊರಟ್ಟಿ, ಸದನವನ್ನು ನಿಯಮದ ಪ್ರಕಾರವೇ ನಡೆಸಬೇಕು. ಮೊದಲು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳುವೆ. ನಂತರ ನಿಮಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆ ಹೀಗಾಗಿ ನಿಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸುತ್ತೇನೆ ಎಂದರು.

ಇದನ್ನು ಒಪ್ಪದ ಕೋಟಾ ಶ್ರೀನಿವಾಸ ಪೂಜಾರಿ ಕೆಲ ವಿಶೇಷ ಸಂದರ್ಭಗಳಲ್ಲಿ ಪ್ರಶ್ನೋತ್ತರ ಅವಧಿಗೂ ಮುನ್ನ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿರುವ ಉದಾಹರಣೆಗಳಿವೆ. ಹಿಂದಿನ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಿದ ನಿದರ್ಶನವಿದೆ. ನೀವು ಏಕಾಏಕಿ ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡುತ್ತೇನೆ ಎಂದು ಹೇಳಿದ್ದು ಸರಿಯಲ್ಲ ಎಂದರು.

ನಾನು ಪ್ರತಿಪಕ್ಷದ ನಾಯಕನಾಗಿ ಸರ್ಕಾರದ ಗಮನಸೆಳೆಯುವುದು ನನ್ನ ಜವಾಬ್ದಾರಿ. ಸರ್ಕಾರ ಸಮರ್ಪಕವಾಗಿ ಬರಗಾಲದನ್ನು ನಿರ್ವಹಣೆಯನ್ನು ಮಾಡಿಲ್ಲ. ಯಾವ ಯಾವ ಕಡೆ ಏನು ಸಮಸ್ಯೆ ಇದೆ, ಲೋಪದೋಷಗಳು ಏನೇನು ಎಂಬುದರ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಗೂ ಮುನ್ನವೇ ವಿಷಯ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದರೆ ಏನಾಗುತ್ತಿತ್ತು ಎಂದು ಸಭಾಪತಿಯನ್ನು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಕೃಷ್ಣಭೆರೇಗೌಡರು, ಈ ಸದನದ ನಿಯಮದ ಪ್ರಕಾರ ದಿನದ ಕಾರ್ಯ ಕಲಾಪಗಳನ್ನು ನಡೆಸಬೇಕು.ನಿಯಮ 68ರಡಿ ವಿಷಯದ ಗಾಂಭೀರ್ಯತೆ ಅರಿತು ಸಭಾಪತಿಯವರು ಚರ್ಚೆಗೆ ಅವಕಾಶ ಕೊಡಬಹುದು. ನಿಯಮ 59ರ ಪ್ರಕಾರ ದಿನದ ಕಾರ್ಯಕಲಾಪ ಪ್ರಶ್ನೋತ್ತರ ಅವಧಿ, ಶೂನ್ಯವೇಳೆ ನಂತರ ವಿಷಯ ಪ್ರಸ್ತಾಪಿಸಲು ಸಭಾಪತಿ ಅನುಮತಿ ಕೊಡಬಹುದು. ಈ ವಿಷಯವೂ ಚರ್ಚೆಗೆ ಅರ್ಹತೆ ಇದೆ ಎಂಬುದು ಸಭಾಪತಿಗಳಿಗೆ ಮನವರಿಕೆಯಾದರೆ ಮಾತ್ರ ಚರ್ಚೆ ನಡೆಯಬಹುದು. ಈಗಾಗಲೇ ಸಭಾಪತಿಯವರು ನಿಲುವಳಿ ತಿರಸ್ಕರಿಸಿದ್ದೇನೆಂದು ಪೀಠದಿಂದಲೇ ಆದೇಶ ನೀಡಿರುವುದರಿಂದ ಪುನಃ ಚರ್ಚೆಗೆ ಅವಕಾಶ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ಈ ಹಂತದಲ್ಲಿ ಪ್ರತಿಪಕ್ಷದ (ಬಿಜೆಪಿ) ಸದಸ್ಯರು ಸಭಾಪತಿಯವರು ತಮ್ಮ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದಾಗ ಜೆಡಿಎಸ್ ಸದಸ್ಯರು ಆಕ್ಷೇಪಿಸಿದರು.
ಪೀಠದಿಂದ ಒಂದು ಬಾರಿ ಆದೇಶ ನೀಡಿದಾಗ ಮತ್ತೆ ಮತ್ತೆ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ದಯವಿಟ್ಟು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಿ ಎಂದು ಮನವಿ ಮಾಡಿದರು.

ನಾನು ಪ್ರಶ್ನೋತ್ತರ ಅವಧಿ ಮುಗಿದ ನಂತರ ಚರ್ಚೆಗೆ ಅವಕಾಶ ಕಲ್ಪಿಸುತ್ತೇನೆ. ಈ ಪೀಠದಿಂದ ಆದೇಶ ನೀಡಿದ ಮೇಲೆ ಅದನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಎಲ್ಲ ಸದಸ್ಯರು ಮೊದಲು ಪೀಠಕ್ಕೆ ಗೌರವ ಕೊಡಿ ಎಂದು ಹೊರಟ್ಟಿ ಸೂಚಿಸಿದರು.

ಇದಕ್ಕೆ ಇನ್ನಷ್ಟು ಕೆರಳಿದ ಶೀವಿಆಸ್, ನಾವು ಪೀಠಕ್ಕೆ ಅಗೌರವ ಸೂಚಿಸುತ್ತಿಲ್ಲ. ಹಿಂದೆ ಇದೇ ಪೀಠದಿಂದ ಆದೇಶ ನೀಡಿದಾಗ ಅದನ್ನು ಪುನಃ ಪರಿಶೀಲನೆ ಮಾಡಿದ ಪ್ರಸಂಗಗಳಿವೆ. ನೀವು ಹೀಗೆ ಏಕಾಏಕಿ ವಿರೋಧ ಪಕ್ಷದ ನಾಯಕರ ಹಕ್ಕುಗಳನ್ನು ಮೊಟಕುಗೊಳಿಸಬೇಡಿ.ನಾನು ಹೇಳಿದ್ದೇ ಸರಿ ಎನ್ನುವುದಾದರೆ ನಾವು ಅಸಹಾಯಕರಾಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ವಿರೋಧ ಪಕ್ಷದವರಿಗೆ ಎಲ್ಲಿಯೂ ಅಗೌರವ ಸೂಚಿಸುತ್ತಿಲ್ಲ. ನಿನ್ನೆ ಕಲಾಪವನ್ನು ಮುಂದೂಡಬಾರದೆಂಬ ಇಚ್ಚೆ ಇತ್ತು.ಆದರೆ ಪ್ರತಿಪಕ್ಷವರು ಮಾಡಿಕೊಂಡ ಮನವಿಗೆ ಒಪ್ಪಿಕೊಂಡಿದ್ದೇವೆ. ಈಗ ಆಕ್ಷೇಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ