ಬ್ಯಾಂಕ್​ಗಳ ಸಾಲ ತೀರಿಸಲು ಸಿದ್ಧನಿದ್ದೇನೆ, ಪ್ಲೀಸ್​ ತೆಗೆದುಕೊಳ್ಳಿ!; ಟ್ವಿಟ್ಟರ್​ನಲ್ಲಿ ಮನವಿ ಮಾಡಿದ ‘ಮದ್ಯದ ದೊರೆ’ ಮಲ್ಯ

ನವದೆಹಲಿ: ವಿವಿಐಪಿ ಚಾಪರ್ ಹಗರಣದಲ್ಲಿ ಕಿಕ್ ಬ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುಬೈ ಮೂಲದ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ನಿನ್ನೆ ಯುಎಇ ಒಪ್ಪಿಗೆ ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಬರೋಬ್ಬರಿ 9 ಸಾವಿರ ಕೋಟಿ ಸಾಲ ಪಡೆದು ಲಂಡನ್​ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್​ ಮಲ್ಯಗೆ ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ಬಂಧನದ ಬಗ್ಗೆ ಮತ್ತೆ ಚಿಂತೆ ಶುರುವಾದಂತಿದೆ.

ಬ್ಯಾಂಕ್​ಗಳಿಂದ ಪಡೆದ ಸಾಲ ಮರುಪಾವತಿಸಲು ಸಿದ್ಧನಿದ್ದು, ಬ್ಯಾಂಕುಗಳು ಅದನ್ನು ದಯವಿಟ್ಟು ಸ್ವೀಕರಿಸಬೇಕು ಎಂದು ಟ್ವಿಟ್ಟರ್​ ಮೂಲಕ ವಿಜಯ್​ ಮಲ್ಯ ಇಂದು ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗಳು ತನ್ನನ್ನು ಮೋಸಗಾರ, ದೇಶಬಿಟ್ಟು ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ ಎಂದೆಲ್ಲ ತಪ್ಪಾಗಿ ಬಿಂಬಿಸುತ್ತಿವೆ. ನಾನು ಸಾಲ ಮಾಡಿದ ಹಣವನ್ನು ವಾಪಾಸ್​ ನೀಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ನಾನು ಕೊಟ್ಟ ಆಫರ್​ ಅನ್ನು ಬ್ಯಾಂಕ್​ಗಳು ಒಪ್ಪಿಕೊಂಡರೆ ಅದರಿಂದ ಖಂಡಿತ ನಷ್ಟವಾಗುವುದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಅಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಚಾಪರ್​ ಹಗರಣದ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್​ ಮೈಕೆಲ್ ಅವರನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರ ಮಾಡುವಂತೆ ನಿನ್ನೆ ರಾತ್ರಿ ಆದೇಶ ನೀಡಲಾಗಿತ್ತು. ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ಮಾತನಾಡಿ, ಕ್ರಿಶ್ಚಿಯನ್​ ಮೈಕೆಲ್ ರೀತಿಯಲ್ಲೇ ನಮ್ಮ ದೇಶದಿಂದ ತಲೆಮರೆಸಿಕೊಂಡಿರುವ ವಿಜಯ್​ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನೂ ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ವಿಜಯ್​ ಮಲ್ಯ ಸರಣಿ ಟ್ವೀಟ್​ಗಳನ್ನು ಮಾಡಿದ್ದು, ತನ್ನ ಆಫರ್​ ಒಪ್ಪಿಕೊಂಡು ಎಲ್ಲ ಆರೋಪಗಳಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ನನ್ನನ್ನು ಕೂಡ ಗಡಿಪಾರು ಮಾಡಲಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಆ ಬಗ್ಗೆ ಈಗ ನಾನೇನೂ ಹೇಳುವುದಿಲ್ಲ. ಕಾನೂನುಬದ್ಧವಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದೆಲ್ಲ ಸುಳ್ಳು. ನಾನು ಪಡೆದ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಲು ನಾನು ಸಿದ್ಧನಿದ್ದೇನೆ. ಸರ್ಕಾರ ಮತ್ತು ಬ್ಯಾಂಕ್​ಗಳು ಆ ಹಣವನ್ನು ಸ್ವೀಕರಿಸಬೇಕು. ನಾನು ಹಣವನ್ನು ಹಿಂತಿರುಗಿಸುತ್ತೇನೆ ಎಂದರೂ ಬೇಡ ಎನ್ನುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ