ರಾಮಮಂದಿರ ನಿರ್ಮಾಣಕ್ಕೆ ವಿವಿಧೆಡೆ ನಾಳೆ ಜನಾಗ್ರಹ ಸಭೆ

ಬೆಂಗಳೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಭಾನುವಾರ ಜನಾಗ್ರಹ ಸಭೆ ಹಮ್ಮಿಕೊಂಡಿದೆ.

ಭಕ್ತರು,ಬೆಂಬಲಿಗರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು,ಸುಮಾರು 1ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಸಂಜೆ 4 ಗಂಟೆಗೆ ಜನಾಗ್ರಹ ಸಭೆ ನಡೆಯಲಿದೆ.

ಮೈಸೂರು, ತುಮಕೂರು, ಮಂಡ್ಯ,ಕೋಲಾರ ಭಾಗದ ರಾಮ ಭಕ್ತರು,ಬೆಂಬಲಿಗರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು,ಸುಮಾರು 1ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಸಭೆಯಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನ ಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹರಿದ್ವಾರ ಪರಮಾರ್ಥ ಆಶ್ರಮದ ಪರಮಾಧ್ಯಕ್ಷ ಚಿನ್ಮಯಾನಂದ ಸರಸ್ವತಿ ಮಹಾರಾಜ್‌,ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಭಯ್ಯಾಜಿ ಜೋಷಿ, ವಿ.ಹಿಂ.ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದಜಿ ಪರಾಂಡೆ ಪಾಲ್ಗೊಳ್ಳಲಿದ್ದಾರೆ.

ನಗರದ ನಾನಾ ಭಾಗಗಳಿಂದ ನ್ಯಾಷನಲ್‌ ಹೈಸ್ಕೂಲ್‌ ಮೈದಾನವರೆಗೆ ಶೋಭಾಯಾತ್ರೆ ನಡೆಯಲಿದೆ. ಮಂಗಳೂರಿ ನಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಸಭೆ ನಡೆಯಲಿದೆ.

ಸಭೆಯಲ್ಲಿ ಭಜರಂಗದಳದ ರಾಷ್ಟ್ರೀಯ ಸಂಯೋಜಕ್‌ ಸೋಹನ್‌ ಸಿಂಗ್‌ ಸೋಲಂಕಿ ಪ್ರಮುಖ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜ್ಯೋತಿ ಜಂಕ್ಷನ್‌ನಿಂದ ಬೃಹತ್‌ ಶೋಭಾಯಾತ್ರೆ ಹೊರಡಲಿದೆ. ಇದೇ ವೇಳೆ, ಹುಬ್ಬಳ್ಳಿಯಲ್ಲೂ ಜನಾಗ್ರಹ ಸಭೆ ನಡೆಯಲಿದೆ. ಅಯೋಧ್ಯೆ, ನಾಗಪುರ ದಲ್ಲೂ ಸಭೆ ನಡೆಯುತ್ತಿರುವುದು ವಿಶೇಷ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ