ಅಂಬರೀಶ್ ನಿವಾಸದಲ್ಲೀಗ ನೀರವ ಮೌನ, ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ

ಬೆಂಗಳೂರು, ನ.27-ಜೆ.ಪಿ.ನಗರದಲ್ಲಿರುವ ಅಂಬರೀಶ್ ನಿವಾಸದಲ್ಲೀಗ ನೀರವ ಮೌನ.ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ನಿನ್ನೆ ಇಡೀ ದಿನ ಅಂಬರೀಶ್ ಅವರ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ದಣಿದಿದ್ದ ಅಂಬರೀಶ್ ಕುಟುಂಬದವರೆಲ್ಲರೂ ರಾತ್ರಿ ಜೆ.ಪಿ.ನಗರದ ನಿವಾಸದಲ್ಲಿ ತಂಗಿದ್ದರು. ತಡರಾತ್ರಿ 12 ಗಂಟೆಯವರೆಗೂ ಅಂಬಿ ಆಪ್ತರು ಮನೆಗೆ ಆಗಮಿಸಿ ಸಾಂತ್ವನ ಹೇಳುತ್ತಿದ್ದರು. ಸಾವಿನ ದುಃಖದಲ್ಲಿರುವ ಕುಟುಂಬದವರಿಗೆ ಅಂಬರೀಶ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಬರೀಶ್ ಅವರ ಪ್ರೀತಿಯ ಶ್ವಾನಗಳೂ ಸಹ ಮೂಕವೇದನೆ ಅನುಭವಿಸುತ್ತಿದ್ದವು.

ಕನ್ವರ್ ಮತ್ತು ಬುಲ್‍ಬುಲ್ ಎಂಬ ಹೆಸರಿನ ನಾಯಿಗಳನ್ನು ಹಿಡಿದುಕೊಂಡು ಅಂಬರೀಶ್ ಪ್ರತಿದಿನ ವಾಕಿಂಗ್ ಹೋಗುತ್ತಿದ್ದರು. ಈಗ ತಮ್ಮ ಯಜಮಾನನಿಲ್ಲದೆ ನಾಯಿಗಳು ಮೌನಕ್ಕೆ ಶರಣಾಗಿ ಆಹಾರವನ್ನೂ ಸೇವಿಸದೆ ರೋದಿಸುತ್ತಿದ್ದುದು ಕಂಡುಬಂತು.

ಈ ಬೆಳಗ್ಗೆಯಿಂದ ಅಂಬರೀಶ್ ಅವರ ಆಪ್ತರು, ಬಂಧುಬಗಳದವರು ಅವರ ಮನೆಗೆ ಆಗಮಿಸಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್‍ಗೆ ಸಾಂತ್ವಾನ ಹೇಳುತ್ತಿದ್ದರು. ಸುದೀರ್ಘ 27 ವರ್ಷಗಳ ಕಾಲ ಅಂಬಿಯವರೊಂದಿಗೆ ಸಂಸಾರ ಸಾಗಿಸಿದ ಸುಮಲತಾ ಅವರು ತಮ್ಮ ಪತಿಯ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬಂದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ