ತ್ಯಾಜ್ಯ ಸಂಸ್ಕರಣಾ ನೀರನ್ನು ಬೆಂಗಳೂರು ಕೆರೆ ತುಂಬಿಸಲು ಕ್ರಮ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು: ಹೊಸದಾಗಿ ನಿರ್ಮಿಸುವ ಎಲ್ಲಾ ಅಪಾರ್ಟ್‌ಮೆಂಟ್‌‌ಗಳಲ್ಲೂ ಸೇವೆಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ (ಎಸ್‌ಟಿಪಿ) ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕಬ್ಬನ್‌ಪಾರ್ಕ್‌ನಲ್ಲಿರುವ ತ್ಯಾಜ್ಯ ನೀರಿನ ಮರುಬಳಕೆ ಸ್ಥಾವರದಲ್ಲಿ 4 ಎಂಎಲ್‌ಡಿ ಸಾಮರ್ಥ್ಯಕ್ಕೆ ಹೆಚ್ಚಿಸಿರುವ
ಘಟಕ ಹಾಗೂ ಕೆ ಆ್ಯಂಡ್‌ ಸಿ ವ್ಯಾಲಿಯಲ್ಲಿ ನಿರ್ಮಿಸುತ್ತಿರುವ 150 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕಾಮಗಾರಿ ವೀಕ್ಷಿಸಿ, ಬಳಿಕ ಸುದ್ದಿಗೋಷ್ಠಿ ನಡೆಸಿದರು.

ಅಪಾರ್ಟ್‌ಮೆಂಟ್‌ಗಳಿಂದಲೇ ಹೆಚ್ಚು ತ್ಯಾಜ್ಯ ನೀರು ಉತ್ಪಾದನೆಯಾಗುತ್ತಿದೆ. ಹೀಗಾಗಿ ಹೊಸ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಅಳವಡಿಸಿಕೊಳ್ಳಬೇಕು ಎಂದರು.

ಬೆಂಗಳೂರಿನಲ್ಲಿ ಒಟ್ಟು 1440 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಈ ಪೈಕಿ ಪ್ರಸ್ತುತ 1052 ಎಂಎಲ್‌ಡಿ ನೀರನ್ನು ಮಾತ್ರ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಜಲಂಮಡಳಿ ಹೊಂದಿದೆ.

ಚೆಲ್ಲಘಟ್ಟದ ಕೆ ಆ್ಯಂಡ್‌ ಸಿ ವ್ಯಾಲಿಯಲ್ಲಿ ನಿರ್ಮಿಸುತ್ತಿರುವ ಘಟಕದಲ್ಲಿ 515 ಎಂಎಲ್‌ಡಿ ತ್ಯಾಜ್ಯ ನೀರನ್ನು ಸಂಸ್ಕರಿಸುವ ಯೋಜನೆ ಇದ್ದು, 2020 ಒಳಗೆ ಈ ಘಟಕದ‌ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ತ್ಯಾಜ್ಯ ನೀರು‌ ಸಂಸ್ಕರಿಸುವ ಸಾಮರ್ಥ್ಯ 1572 ಎಂಎಲ್‌ಡಿ‌ಗೆ ಏರಲಿದೆ. ಬಿವಿಎಂಪಿ ವ್ಯಾಪ್ತಿಗೆ ಹೊಸದಾಗಿ ಬೇರ್ಪಡೆಗೊಂಡಿರುವ 110 ಹಳ್ಳಿಗಳಿಂದ ಉತ್ಪಾದನೆಯಾಗುವ 129 ಎಂಎಲ್‌ಡಿ ತ್ಯಾಜ್ಯ ನೀರನ್ನು ಸಹ ಸಂಸ್ಕರಿಸುವ ಸಾಮರ್ಥ್ಯ ಜಲಮಂಡಳಿ ಹೊಂದಲಿದೆ ಎಂದರು.

ಪ್ರಸ್ತುತ ಕೊರಮಂಗಲ ಚಲಘಟ್ಟ ಘಟಕದಲ್ಲಿ 480 ಎಂಎಲ್‌ಡಿ ಸಂಸ್ಕರಣೆಯಾಗುತ್ತಿದೆ. ಈವರೆಗೂ 308 ಎಂಎಲ್‌ಡಿ ಸಂಸ್ಕರಿಸಿದ್ದೇವೆ. ಇನ್ನು150 ಎಂಎಲ್‌ಡಿಗೆ ಏರಿಸಲು ಯೋಜನೆ ಹಾಕಿಕೊಂಡಿದ್ದೇವೆ. ಇದರಿಂದ ಒಟ್ಟು ಈ ಘಟಕದಲ್ಲಿಯೇ 458 ಎಂಎಲ್‌ಡಿ ನೀರನ್ನು ಸಂಸ್ಕರಿಸಲಿದೆ. ಹೊಸ ಘಟಕ ಬಂದ ಬಳಿಕ ಇದರ ಸಾಮರ್ಥ್ಯ 580 ಕ್ಕೆ ಹೆಚ್ಚಲಿದೆ.

ಈ ಘಟಕದಿಂದ ಸಂಸ್ಕರಣೆಗೊಂಡ 60 ಎಂಎಲ್‌ಡಿ ನೀರನ್ನು‌ ಬೆಳ್ಳಂದೂರು ಕೆರೆಗೆ ತುಂಬಿಸಲಾಗುತ್ತಿದೆ. ಆದರೆ ಈ ಸುತ್ತಲಿನ ಕೈಗಾರಿಕೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ಎಸ್‌ಟಿಪಿ ಅಳವಡಿಸಿಕೊಳ್ಳಬೇಕು. ಈಗಾಗಲೇ ಅಳವಡಿಸಿಕೊಂಡವರು ಅದರ ಬಳಕೆ ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ.‌ ಈ ರೀತಿ ನಿರ್ಲಕ್ಷ್ಯ ಧೋರಣೆ ತೋರಿದರೆ
ಅಂಥವರ ವಿರುದ್ಧ ಕ್ರಮ ತೆಗೆದುಕೊಂಡು, ಆ ಸ್ಥಳದಲ್ಲಿ ವಾಸವಿರುವುದಾಗಲಿ ಅಥವಾ ಕೈಗಾರಿಕೆ ಮುಂದುವರೆಸಲು ಅವಕಾಶ ಕೊಡುವುದಿಲ್ಲ.
ಜೊತೆಗೆ, ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಎಸ್‌ಟಿಪಿ ಅವಳಡಿಕೆ ಮಾಡಿಕೊಳ್ಳಬೇಕು. ಬಿಡಿಎ ಅಪಾರ್ಟ್‌ಮೆಂಟ್‌ನಲ್ಲೂ ಇದರ ಬಳಕೆ ಆಗಲೇಬೇಕು. ಎಸ್‌ಟಿಪಿಯನ್ನು ಜಲಮಂಡಳಿಯೇ ನಿರ್ವಹಣೆ ಮಾಡಲಿದೆ‌ ಎಂದು ಹೇಳಿದರು.

ಚೆಲ್ಲಘಟ್ಟ ಘಟಕ ಪ್ರಾರಂಭದ ಸಂದರ್ಭದಲ್ಲಿ ಮಿಷನರಿಗಳು ಇನ್ನೂ ಮೇಲ್ದರ್ಜೆಗೇರಿಸದ ಕಾರಣ ಬೆಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡಿತ್ತು. ಕೋಲಾರದಲ್ಲಿಯೂ ಪ್ರತಿಭಟನೆ ನಡೆದಿತ್ತು.‌ ಇಂದು ಈ‌ ಸಂಸ್ಕರಣ ಘಟಕದಿಂದ ಕುಡಿಯಲು ಯೋಗ್ಯವಾದ ಮಟ್ಟದಲ್ಲಿ ಶುದ್ದೀಕರಣ ಮಾಡಲಾಗುತ್ತಿದೆ. ಕೃಷಿ ಹಾಗೂ ಬೆಳೆಗೆ ಯೋಗ್ಯವಾದ ನೀರನ್ನು ಸಂಸ್ಕರಿಸಲಾಗಿದೆ ಎಂದು ಹೇಳಿದರು.

ಕೆರೆ ತುಂಬಿಸಲಾಗುವುದು:
ಸಂಸ್ಕರಣ ಘಟಕದಿಂದ ಶುದ್ಧೀಕರಣಗೊಂಡ ನೀರನ್ನು ಕೆರೆ ತುಂಬಿಸಲು ಬಳಸಲಾಗುತ್ತದೆ. ಈಗಾಗಲೇ 7 ಕೆರೆ ತುಂಬಿಸಿದ್ದು, ಆನೆಕಲ್ಲು ಭಾಗಕ್ಕೆ 185 ಎಂಎಲ್‌ಟಿ ನೀರು ನೀಡುವಂತೆ ಕೇಳಿದ್ದಾರೆ. ಬೆಂಗಳೂರಿನಲ್ಲೂ ಅಹ ಕೆರೆ ತುಂಬಿಸುವ ಯೋಜನೆ‌ಕೈಗೆತ್ತಿಕೊಳ್ಳಲಿದ್ದೇವೆ. ಇದರೊಂದಿಗೆ ಕೈಗಾರಿಕೆಗಳ ಬಳಕೆಗೂ ಇಂತಿಷ್ಟ ಮೊತ್ತ‌ ನಿಗದಿ ಮಾಡಿ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.

ಚೆಲ್ಲಘಟ್ಟ ಘಟಕದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ‌ ಉಳಿಯುವ ಕೆಸರಿನಿಂದ 1 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಈ ಘಟಕದಲ್ಲಿ ಬಳಸುವ ವಿದ್ಯುತ್‌ ಪೈಕಿ ಶೇ.40 ವಿದ್ಯುತ್‌ನನ್ನು ಇಲ್ಲಿಯೇ ಉತ್ಪಾದಿಸಲಾಗುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ