ನವೀಕೃತ ಸ್ವಾಮಿ ವಿವೇಕಾನಂದ ಉದ್ಯಾನವನ ಲೋಕಾರ್ಪಣೆ

ಬೆಂಗಳೂರು, ನ.18- ಬಿಬಿಎಂಪಿ ವ್ಯಾಪ್ತಿಯ ನಾಗಪುರ ವಾರ್ಡ್‍ನಲ್ಲಿ ನವೀಕೃತ ಸ್ವಾಮಿ ವಿವೇಕಾನಂದ ಉದ್ಯಾನವನವನ್ನು ಕೇಂದ್ರ ಸಚಿವ ಸದಾನಂದಗೌಡ ಅವರು ಇಂದು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಪಾರದರ್ಶಕ ಆಡಳಿತ ಇದ್ದರೆ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತದೆ. ರಾಜಕಾರಣ ಇರಬೇಕು ಆದರೆ ಅಭಿವೃದ್ಧಿ ಕೆಲಸಗಳಿಗೆ ಅದು ಅಡ್ಡಿ ಬರಬಾರದು ಎಂದು ಹೇಳಿದರು.

ಶಾಸಕರಾದ ಗೋಪಾಲಯ್ಯ ಮಾತನಾಡಿ, ಸ್ವಾಮಿ ವಿವೇಕಾನಂದ ಉದ್ಯಾನವನಕ್ಕೆ ಬರುವ ಸಾರ್ವಜನಿಕರು ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಬೇಕು.3 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ ನವೀಕರಣಗೊಳಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ನಾಗಪುರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಭದ್ರೇಗೌಡರು,ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಮಾಜಿ ಉಪಮಹಾಪೌರರಾದ ಎಸ್.ಹರೀಶ್, ಹೇಮಲತಾ ಗೋಪಾಲಯ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಂಗಮ್ಮ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಮಿ ವಿವೇಕಾನಂದ ಉದ್ಯಾನವನದ ನೂತನ ಪಾದಚಾರಿ ಮಾರ್ಗ ,ವಿಶ್ರಾಂತಿ ತಾಣ, ಹಸಿ ಕಸದಿಂದ ಗೊಬ್ಬರ ತಯಾರಿಕೆ ಘಟಕ ಮತ್ತು ಒಳಾಂಗಣ ಕ್ರೀಡಾ ಸಲಕರಣೆಗಳನ್ನು ಲೋಕಾರ್ಪಣೆ ಮಾಡಲಾಯಿತು.

ಸುಮಾರು 10,865-93 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಉದ್ಯಾನವನಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಸುಸಜ್ಜಿತ ಸಲಕರಣಿಗಳನ್ನು ಅಳವಡಿಸಲಾಗಿದೆ. ವಾಯುವಿಹಾರ ನಡೆಸುವಾಗ ಮೇಲುಧ್ವನಿಯಲ್ಲಿ ಸಂಗೀತದ ನಿನಾದ ಉದ್ಯಾನವನದಲ್ಲಿ ಕೇಳಿಬರುತ್ತದೆ. ಪಾರ್ಕ್‍ನ್ನು ಸದಾ ತಂಪಾಗಿರಿಸುವ ನೀರಿನ ಕಾರಂಜಿ ವ್ಯವಸ್ತೆ, ಮಳೆ ನೀರು ಭೂಮಿಗೆ ಇಂಗುವಂತೆ ಮಾಡುವ ನೀರಿಂಗಿಸುವ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಎಲ್‍ಇಡಿ ಬಲ್ಪ್ ವ್ಯವಸ್ಥೆ, ಸುಮಾರು 25 ಕುಳಿತುಕೊಳ್ಳುವ ಬೆಂಚ್‍ಗಳನ್ನು ಅಳವಡಿಸಲಾಗಿದೆ. ದಿನದ 24 ಗಂಟೆಯೂ ಭದ್ರತಾ ವ್ಯವಸ್ಥೆ ಹೊಂದಿರುವ ಈ ಪಾರ್ಕ್‍ನಲ್ಲಿ ಹಸುರಿನ ನೆಲಹಾಸು, ಪಾರ್ಕಿನ ಸುತ್ತಲೂ ಸಸಿಗಳು ಗಮನ ಸೆಳೆಯುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ