ಧ್ರುವಸರ್ಜಾಗೆ ಕೂಡಿ ಬಂದ ಕಂಕಣಭಾಗ್ಯ

ಬೆಂಗಳೂರು, ನ.17-ಆಕ್ಷನ್ ಪ್ರಿನ್ಸ್, ಬಹದ್ದೂರ್ ಗಂಡು ಖ್ಯಾತಿಯ ಧ್ರುವಸರ್ಜಾಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ತಮ್ಮ ಬಾಲ್ಯದ ಗೆಳತಿಯನ್ನು ಅವರು ವರಿಸಲಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆಯಷ್ಟೇ ಧ್ರುವ ಸಹೋದರ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾರಾಜ್ ಅವರನ್ನು ವರಿಸಿದ್ದರು. ಆ ಸಂದರ್ಭದಲ್ಲೇ ಧ್ರುವ ಸರ್ಜಾ ವಿವಾಹದ ಬಗ್ಗೆ ಪುಕಾರುಗಳು ಹಬ್ಬಿದ್ದವು.

ಧ್ರುವಸರ್ಜಾ ಕನ್ನಡದ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇತ್ತೀಚೆಗೆ ತಮ್ಮ ಜನ್ಮದಿನದ ಸಂದರ್ಭದಲ್ಲಿ ಸ್ವತಃ ಧ್ರುವ ತಾನು ಪ್ರೀತಿಸಿದ ಹುಡುಗಿಯನ್ನೇ ವಿವಾಹವಾಗುವುದಾಗಿ ಹೇಳಿಕೊಂಡಿದ್ದರು. ಅದು ಈಗ ನಿಜವಾಗಿದೆ. ತಮ್ಮ ಎದುರು ಮನೆಯ ಹುಡುಗಿ ಪ್ರೇರಣಾ ಎಂಬಾಕೆಯನ್ನು ಧ್ರುವ 16 ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರ ಮನೆಯವರ ಒಪ್ಪಿಗೆ ಮೇರೆಗೆ ಹಸೆಮಣೆ ಏರಲಿದ್ದಾರೆ.

ಖ್ಯಾತ ಖಳನಟ ಶಕ್ತಿ ಪ್ರಸಾದ್ ಮೊಮ್ಮಗ, ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸಹೋದರಿಯ ಪುತ್ರ, ಹೆಸರಾಂತ ನಟ ಚಿರಂಜೀವಿ ಸರ್ಜಾ ಅವರ ಸಹೋದರನೂ ಆದ ಧ್ರುವಸರ್ಜಾ ಡಿಸೆಂಬರ್ ಮೊದಲ ವಾರದಲ್ಲಿ ಎಂಗೇಜ್‍ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

ಪ್ರೇರಣಾ ಅವರು ನಗರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಕೆ ಕೂಡಾ ಆಂಜನೇಯ ಭಕ್ತೆ. ಹಾಗಾಗಿ ನಗರದ ಬನಶಂಕರಿ ಬಳಿ ಇರುವ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಧ್ರುವಸರ್ಜಾ ಮತ್ತು ಪ್ರೇರಣಾ ಅವರ ವಿವಾಹ ನಿಶ್ಚಿತಾರ್ಥ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಧ್ರುವಸರ್ಜಾ ಅದ್ದೂರಿ, ಭರ್ಜರಿ, ಬಹದ್ದೂರ್ ಎಂಬ ಮೂರು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಅಂತೂ ಧ್ರುವಸರ್ಜಾ ಹೇಳಿಕೊಂಡಂತೆ ತಾವು ಪ್ರೀತಿಸಿದ ತಮ್ಮ ಬಾಲ್ಯದ ಗೆಳತಿಯನ್ನೇ ವರಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ