ತಿರುವನತಪುರಂ : ಶಬರಿಮಲೆ ದೇಗುಲದ ಪ್ರವೇಶಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿದ್ದೇ ನೀಡಿದ್ದು ದೇಶದಲ್ಲಿ ದೊಡ್ಡ ಗಲಾಟೆಯೇ ಎದ್ದುಬಿಟ್ಟಿತು.
ಕಳೆದ ತಿಂಗಳು ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆದಿದ್ದು, ಮಹಿಳೆಯರು ಒಳ ಪ್ರವೇಶಿಸಿದಂತೆ ಹಿಂದು ಕಾರ್ಯಕರ್ತರು ತಡೆಯಲು ಹೋಗಿ ಗಲಭೆ ಸೃಷ್ಟಿಸಿದ ಘಟನೆ ನಡೆದಿತ್ತು. ಇದರಿಂದಾಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಬರಿಮಲೆಯಲ್ಲಿ ಪೂಜೆ ನೆರವೇರಿಸಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಅಷ್ಟೆಲ್ಲ ಗಲಾಟೆಯಾದರೂ, ಸುಪ್ರೀಂಕೋರ್ಟೇ ತೀರ್ಪು ನೀಡಿದ್ದರೂ ಯಾವ ಮಹಿಳೆಗೂ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ.
ಈ ತಿಂಗಳು ಕೂಡ ಮುಂದಿನ ವಾರದಿಂದ ಶಬರಿಮಲೆಯಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಇದಕ್ಕಾಗಿ ತಮಗೆ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸುವಂತೆ 550ಕ್ಕೂ ಹೆಚ್ಚು 10ರಿಂದ 50 ವರ್ಷದೊಳಗಿನ ಮಹಿಳೆಯರು ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿರುವುದು ವಿಶೇಷ. ಕಳೆದ ತಿಂಗಳು ಯಾರೊಬ್ಬ ಮಹಿಳೆಗೂ ಒಳಪ್ರವೇಶಿಸಲು ಅವಕಾಶ ಸಿಗದಿದ್ದರೂ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆಯೇನೂ ಕಡಿಮೆಯಿಲ್ಲ.
ಪ್ರತಿ ವರ್ಷವೂ ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಅನುಕೂಲವಾಗಲೆಂದು ಕೇರಳ ಪೋಲೀಸರು ಆನ್ ಲೈನ್ ಮೂಲಕ ಬುಕ್ ಮಾಡಲು ಅವಕಾಶ ನೀಡುತ್ತಾರೆ. ಈ ವರ್ಷವೂ ಆ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ದೇವರ ದರ್ಶನಕ್ಕೆ ದಿನ ನಿಗದಿ ಮಾಡಿಕೊಂಡು ಮುಂಚಿತವಾಗಿ ಬುಕ್ ಮಾಡಿಕೊಳ್ಳುತ್ತಾರೆ. ಇದರಲ್ಲಿ ಇದೇ ಮೊದಲ ಬಾರಿಗೆ 550 ಮಹಿಳೆಯರ ಹೆಸರು ಕೂಡ ದಾಖಲಾಗಿದೆ. ಹೀಗಾಗಿ, ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಸಿಗುತ್ತದಾ? ಇಲ್ಲವಾ? ಎಂಬ ಪ್ರರ್ಶನೆ ಉದ್ಭವವಾಗಿದೆ.