ನೋಟು ಅಮಾನೀಕರಣಕ್ಕೆ 2 ವರ್ಷ: ಕಾಂಗ್ರೆಸ್ ಕರಾಳ ದಿನ ಆಚರಣೆ

ಬೆಂಗಳೂರು, ನ.9- ನೋಟು ಅಮಾನೀಕರಣಗೊಂಡು ಎರಡು ವರ್ಷ ಕಳೆದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಕರಾಳ ದಿನ ಆಚರಿಸಿತು.
ದೇಶಾದ್ಯಂತ ನಡೆದ ಪ್ರತಿಭಟನೆ ಅಂಗವಾಗಿ ಬೆಂಗಳೂರಿನ ನಗರ ಜಿಲ್ಲಾ ಕಾಂಗ್ರೆಸ್ ಘಟಕಗಳು ಆನಂದ್‍ರಾವ್ ವೃತ್ತದ ಬಳಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿತ್ತು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಜಮೀರ್ ಅಹಮ್ಮದ್‍ಖಾನ್, ಮಾಜಿ ಸಚಿವರಾದ ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಸಂಸದರಾದ ವಿ.ಎಸ್.ಉಗ್ರಪ್ಪ, ಚಂದ್ರಪ್ಪ, ರಾಜೀವ್‍ಗೌಡ, ವಿಧಾನಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಅವರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, 1991ರಲ್ಲಿ ಭಾರತ ಚಿನ್ನವನ್ನು ಅಡವಿಡುವ ಮಟ್ಟಿಗೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು. ನಂತರ ಆರ್ಥಿಕ ಸಚಿವರಾದ ಡಾ.ಮನಮೋಹನ್‍ಸಿಂಗ್ ಅವರು ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡಿದರು.
ಆದರೆ, ಮೋದಿ ಅವರು ಪ್ರಧಾನಿ ಆದ ನಂತರ ಕಳೆದ ಎರಡು ವರ್ಷದ ಹಿಂದೆ ನವೆಂಬರ್ 8ರಂದು ಏಕಾಏಕಿ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ದೇಶವನ್ನು ಆರ್ಥಿಕವಾಗಿ ಅಧೋಗತಿಗೆ ತಳ್ಳಿದ್ದಾರೆ. ಈಗ ಆರ್‍ಬಿಐನಲ್ಲಿರುವ 3.5ಲಕ್ಷ ಕೋಟಿ ರೂ. ಕಾಯ್ದಿಟ್ಟ ಹಣವನ್ನು ಸರ್ಕಾರಕ್ಕೆ ನೀಡುವಂತೆ ಆರ್‍ಬಿಐ ಮೇಲೆ ಒತ್ತಡ ಹೇರುತ್ತಾರೆ ಎಂದು ಆರೋಪಿಸಿದರು.

ದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗದ ಮೋದಿ ಅವರು ಜನರ ದಾರಿ ತಪ್ಪಿಸಲು ರಾಮಮಂದಿರ, ಬಾಬ್ರಿ ಮಸೀದಿ ಎಂಬ ಭಾವನಾತ್ಮಕ ವಿಷಯಗಳನ್ನು ಕೆಣಕುತ್ತಿದ್ದಾರೆ. ದೇಶ ಕಟ್ಟಲು ಬಿಜೆಪಿಯಿಂದ ಸಾಧ್ಯವಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷವೇ ಸೂಕ್ತ ಎಂದರು.
ಸಚಿವ ಜಮೀರ್ ಅಹಮ್ಮದ್‍ಖಾನ್ ಮಾತನಾಡಿ, ನೋಟು ಅಮಾನೀಕರಣ ಯಾವ ಕಾರಣಕ್ಕಾಯಿತೋ ಗೊತ್ತಿಲ್ಲ. ಜನರ ನಿರೀಕ್ಷೆ ಸುಳ್ಳಾಗಿದೆ. ಟೀ ಮಾರಾಟ ಮಾಡಿ ಬೆಳೆದು ಬಂದ ಮೋದಿ ಅವರಿಗೆ ಬಡವರ ಕಷ್ಟ ಗೊತ್ತಿದೆ. ಒಳ್ಳೆಯದು ಮಾಡುತ್ತಾರೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಅವರು ಜನಾಸಾಮಾನ್ಯರ ಬದಲಿಗೆ ಶ್ರೀಮಂತರ ಹಿತರಕ್ಷಣೆಗೆ ಮುಂದಾಗಿದ್ದಾರೆ. ಮನ್‍ಕಿ ಬಾತ್ ಎಂದರೆ ಅದು ಹೆಂಡತಿ ಜತೆಗಿನ ಖಾಸಗಿ ಮಾತುಕತೆ. ಮೋದಿ ಅವರು ಕಾಮ್‍ಕಿ ಬಾತ್ ಬಗ್ಗೆ ಮಾತನಾಡಲಿ. ನೋಟು ಅಮಾನೀಕರಣದಿಂದ ಶ್ರೀಮಂತರ ಕಪ್ಪು ಹಣ ಅಧಿಕೃತವಾಯಿತೇ ಹೊರತು ಜನಸಾಮಾನ್ಯರಿಗೆ ಲಾಭವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್‍ಗಾಂಧಿ ಪ್ರಧಾನಮಂತ್ರಿಯಾಗುತ್ತಾರೆ. ಅದಕ್ಕೆ ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭೆ ಉಪ ಚುನಾವಣೆಯೇ ಉದಾಹರಣೆ ಎಂದರು.
ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ನೋಟು ಅಮಾನೀಕರಣ ಆರ್‍ಬಿಐ ಕಾಯ್ದೆಗೆ ವಿರುದ್ಧವಾಗಿತ್ತು. ಪ್ರಧಾನಿ ಮೋದಿ ಕೇವಲ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಭಾರತ ಮೋದಿ ಮುಕ್ತಗೊಳ್ಳಬೇಕು. ವಿರೋಧ ಪಕ್ಷವಾಗಿ ಬಿಜೆಪಿಯಲ್ಲಿ ಅಸ್ತಿತ್ವದಲ್ಲಿರಲಿ ಎಂದು ಹೇಳಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನೋಟು ಅಮಾನೀಕರಣ ದೇಶಕ್ಕೆ ಮಾಡಿದ ದ್ರೋಹ. ನೋಟು ಅಮಾನೀಕರಣದ ನಂತರ ಶೇ.99.5ರಷ್ಟು ಹಣ ಬ್ಯಾಂಕುಗಳಿಗೆ ವಾಪಸ್ ಬಂದಿದ್ದೇ ಆಗಿದ್ದರೆ ಕಪ್ಪು ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.

ನೋಟಿ ಅಮಾನೀಕರಣದ ನಂತರ ಭ್ರಷ್ಟಾಚಾರವೂ ನಿಂತಿಲ್ಲ. ಕಪ್ಪು ಹಣವೂ ಕಡಿಮೆಯಾಗಿಲ್ಲ. ಆದರೆ, ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆರ್‍ಬಿಐನಲ್ಲಿರುವ ಕಾಯ್ದಿಟ್ಟ ಹಣವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ. ಆರ್‍ಬಿಐನ ಗೌರ್ನರ್ ರಾಜೀನಾಮೆ ನೀಡುವ ಸ್ಥಿತಿ ಬಂದಿದೆ ಎಂದರು.

ಸಿಬಿಐ, ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ಮೋದಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾವೇರಿ, ಮಹದಾಯಿ ಯಾವುದೇ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಹಾಯ ಮಾಡಲಿಲ್ಲ. ಬಿಜೆಪಿ ಭ್ರಷ್ಟ ಜನರ ಪಕ್ಷ. ದೇಶಕ್ಕೆ ತಗುಲಿದ ಅನಿಷ್ಟ ಎಂದು ಕಿಡಿ ಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಹಿಂದುತ್ವ ಎಂಬುದು ಬಿಜೆಪಿಯವರ ಜಹಗೀರ್ ಅಲ್ಲ. ನೋಟು ಅಮಾನೀಕರಣ ಶ್ರೀಮಂತರ ಹಣವನ್ನು ರಕ್ಷಣೆ ಮಾಡುವ ಷಡ್ಯಂತ್ರವಾಗಿ ತೆಗೆದುಕೊಂಡ ನಿರ್ಧಾರ. ದೇಶದ ಜನರಿಗೆ ಮಾಡಿದ ವಂಚನೆ. ನೋಟು ಅಮಾನೀಕರಣದ ಮೊದಲು ಬಿಜೆಪಿ ಅನೇಕ ಕಡೆ ಜಮೀನು ಖರೀದಿ ಮಾಡಿತ್ತು ಎಂದು ಆರೋಪಿಸಿದರು.

ರಿಜ್ವಾನ್ ಅರ್ಷದ್ ಮತ್ತು ಸಂಸದ ರಾಜೀವ್‍ಗೌಡ ಮಾತನಾಡಿ, ಮೋದಿ ಅವರು ತೊಘಲಕ್ ದರ್ಬಾರ್ ಮಾಡುತ್ತಿದ್ದಾರೆ. ನೋಟು ಅಮಾನೀಕರಣದಿಂದಾಗಿ ಸಾವಿರಾರು ಕೋಟಿ ನಷ್ಟವಾಗಿದೆ. ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಸಮಾಜ ಒಡೆಯುವ ಸಂಚನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಅಮರನಾಥ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ