ನೇಪಾಳದ ಮೂಲಕ ಭಾರತದೊಳಗೆ ನುಸುಳಲು ಪಾಕ್​ ಸಿದ್ಧತೆ

ಶ್ರೀನಗರ: ಇತ್ತೀಚೆಗೆ ಭಾರತೀಯ ಸೇನಾಪಡೆ ದೇಶದ ಗಡಿಯನ್ನು ದಾಟಿ ಒಳ ನುಸುಳುವ ಪಾಕ್​ ಉಗ್ರರನ್ನು ಸದೆಬಡಿಯುವ ಮೂಲಕ ತಕ್ಕ ಪಾಠ ಕಲಿಸುತ್ತಿದೆ. ಇದರಿಂದ ಕೋಪಗೊಂಡಿರುವ   ಪಾಕಿಸ್ಥಾನ  ಸೈನಿಕರು ನೇಪಾಳದ ಕಡೆಯಿಂದ ಭಾರತದೊಳಗೆ ನುಸುಳಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನ ಸಲಹಲ್ಪಡುತ್ತಿರುವ ಉಗ್ರ ಸಂಘಟನೆಯಾದ ಲಷ್ಕರ್​ -ಇ- ತೊಯ್ಬಾ ನೇಪಾಳದ ಕಠ್ಮಂಡುವಿನಲ್ಲಿ ಎನ್​ಜಿಒ ಒಂದನ್ನು ಸ್ಥಾಪಿಸಿದೆ. ಈ ಸಂಸ್ಥೆಯ ಮೂಲಕ ಲಷ್ಕರ್​-ಇ-ತೊಯ್ಬಾ ತನ್ನ ಕಾರ್ಯ ಸಾಧಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಈ ಕಾರಣದಿಂದಲೇ ಆ ಎನ್​ಜಿಒಗೆ ಬೇಕಾದ ಎಲ್ಲ ಆರ್ಥಿಕ ನೆರವನ್ನೂ ಪಾಕಿಸ್ತಾನ ನೀಡುತ್ತಿದೆ ಎಂದು ತಿಳಿದುಬಂದಿದೆ.
ಕಠ್ಮಂಡುವಿನಲ್ಲಿ ಸ್ಥಾಪನೆಯಾಗಿರುವ ಎನ್​ಜಿಒದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಕೂಡ ಲಷ್ಕರ್​-ಇ-ತೊಯ್ಬಾ ಸಂಘಟನೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಭಾರತ ಮತ್ತು ನೇಪಾಳದ ನಡುವೆ ಸಂಚಾರಕ್ಕೆ ಯಾವುದೇ ಅಡೆತಡೆಯಾಗಲಿ, ನಿರ್ಬಂಧವಾಗಲೀ ಇಲ್ಲದಿರುವುದರಿಂದ ಈ ಅವಕಾಶವನ್ನು ಬಳಸಿಕೊಳ್ಳಲು ಲಷ್ಕರ್​ ಸಂಘಟನೆ ಮುಂದಾಗಿದೆ.
ಸದ್ಯಕ್ಕೆ ಭಾರತದ ಮೇಲೆ ದಾಳಿ ನಡೆಸಲು ನಾನಾ ಮಾರ್ಗಗಳನ್ನು ಹುಡುಕುತ್ತಿರುವ ಪಾಕಿಸ್ತಾನ ಬಾಂಗ್ಲಾದೇಶದಲ್ಲೂ ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದೆ. ಢಾಕಾದಲ್ಲಿರುವ ಪಾಕಿಸ್ತಾನದ ಹೈ ಕಮಿಷನ್​ನ ಪಾಕ್​ ರಾಯಭಾರಿ ಅಧಿಕಾರಿಗಳು ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗಳ ಮುಖಂಡರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಆತ್ಮಹತ್ಯಾ ದಾಳಿಯ ತಂಡಕ್ಕೆ ಸೂಕ್ತ ತರಬೇತಿ ನೀಡಿ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಕಳುಹಿಸಬೇಕೆಂದು ಹೇಳಲಾಗಿದೆ. ಸಭೆ ನಡೆದ ಬಳಿಕ, ಬಾಂಗ್ಲಾದೇಶಕ್ಕೆ ಈ ವಿಷಯ ಗೊತ್ತಾಗಿದ್ದು, ಅಲ್ಲಿನ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ