ಕೇಂದ್ರ ಸರ್ಕಾರ, ಆರ್​ಬಿಐ ನಡುವೆ ಉಲ್ಬಣಿಸಿದ ಬಿಕ್ಕಟ್ಟು; ಗೌವರ್ನರ್​ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ಸಾಧ್ಯತೆ

ನವದೆಹಲಿ: ಸೆಂಟ್ರಲ್​ ಬ್ಯಾಂಕ್​ಗೆ ಸಾಲ ನೀಡುವಿಕೆ ವಿಚಾರವಾಗಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರ ನಿಲುವಿನ ಬಗ್ಗೆ ಅಸಮಾಧಾನಗೊಂಡಿರುವ ಆರ್​ಬಿಐ ಗೌವರ್ನರ್​ ಊರ್ಜಿತ್ ಪಟೇಲ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಆರ್​ಬಿಐ ಗೌವರ್ನರ್​ ಹುದ್ದೆಗೆ ರಾಜೀನಾಮೆ ನೀಡುವ ಎಲ್ಲ ಅವಕಾಶಗಳು ಮುಕ್ತವಾಗಿವೆ ಎಂದು ಊರ್ಜಿತ್​ ಪಟೇಲ್​ ಹೇಳಿರುವುದಾಗಿ ಬಲ್ಲಮೂಲಗಳು ತಿಳಿಸಿವೆ. ಮತ್ತೊಂದು ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಗೌವರ್ನರ್​ ನಡುವೆ ಸರಿಪಡಿಸಲಾಗದಷ್ಟು ಬಿಕ್ಕಟ್ಟು ಉಲ್ಬಣಿಸಿದೆ ಎನ್ನಲಾಗಿದೆ.
ಆರ್​ಬಿಐನ ಆಂತರಿಕ ವಿಷಯಗಳಲ್ಲೂ ಕೇಂದ್ರ ಸರ್ಕಾರ ಮೂಗುತೂರಿಸುತ್ತಿದೆ. ಆರ್​ಬಿಐನ ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲೂ ನಿರ್ದೇಶನ ನೀಡುತ್ತಿದೆ ಎಂದು ವರದಿ ಹೇಳಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ, ಆರ್​ಬಿಐ ಆ್ಯಕ್ಟ್​ ಸೆಕ್ಷನ್​ 7 ಆಹ್ವಾನಿಸಿದೆ ಮತ್ತು ಅಪ್ರಸ್ತುತ ನಿರ್ದೇಶನಗಳನ್ನು ಆರ್​ಬಿಐಗೆ ನೀಡುತ್ತಿದೆ, ನನಗೆ ಭಯವಾಗುತ್ತಿದೆ. ಈ ದಿನ ಇನ್ನು ಹೆಚ್ಚಿನ ಕೆಟ್ಟ ಸುದ್ದಿ ಬರಲಿದೆ,” ಎಂದು ಹೇಳಿದ್ದಾರೆ.
ವಿತ್ತ ಸಚಿವ ಅರುಣ್​ ಜೇಟ್ಲಿ ಅವರು ಮಂಗಳವಾರ ನಡೆದ ಸಭೆಯಲ್ಲಿ ಆರ್​ಬಿಐ 2008ರಿಂದ 2014ರವರೆಗೆ ಸಾಲ ಕೊಡುವಿಕೆಯನ್ನು ತಡೆಯುವಲ್ಲಿ ವಿಫಲವಾಗಿದೆ. ಇದರಿಂದ ಬ್ಯಾಂಕ್​​ಗಳು ಕೆಟ್ಟ ಸಾಲದಲ್ಲಿ ಸಿಲುಕಿವೆ ಎಂದು ಆರ್​ಬಿಐ ವಿರುದ್ಧ ಕಟುಟೀಕೆ ಮಾಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ