ನಂದಿ ಬೆಟ್ಟಕ್ಕೆ ಒಬ್ಬಂಟಿಗರಾಗಿ ಹೋಗುವುದಕ್ಕೆ ಜಿಲ್ಲಾಡಳಿತದಿಂದ ನಿಷೇಧ

ಬೆಂಗಳೂರು, ಅ.17- ಚಿಕ್ಕಬಳ್ಳಾಪುರದಲ್ಲಿರುವ ಪ್ರಸಿದ್ಧ ನಂದಿಬೆಟ್ಟಕ್ಕೆ ಒಬ್ಬಂಟಿಗರಾಗಿ ಹೋಗುವುದಕ್ಕೆ ಅಲ್ಲಿನ ಜಿಲ್ಲಾಡಳಿತ ನಿಷೇಧ ಹೇರಿದೆ.
ಈ ಬೆಟ್ಟದಲ್ಲಿ ಒಬ್ಬಂಟಿಗರಾಗಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ.

ಬಹುತೇಕ ಆತ್ಮಹತ್ಯೆ ಸಂತ್ರಸ್ತರು ಇಲ್ಲಿಗೆ ಏಕಾಂಗಿಯಾಗಿ ಬಂದು, ಈ ಪ್ರಸಿದ್ಧ ವಿಹಾರಧಾಮದ ಆಕರ್ಷಕ ಬಿಂದುವಾದ ಟಿಪ್ಪು ಡ್ರಾಪ್‍ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಒಬ್ಬಂಟಿಯಾಗಿ ಬರುವ ಜನರನ್ನು ಶುಲ್ಕ ಕೌಂಟರ್‍ನಲ್ಲಿ ತಡೆದು ವಾಪಸ್ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಪ್ಪು ಸುಲ್ತಾನ್ ಆಡಳಿತದ ಅವಧಿಯಲ್ಲಿ, ಮರಣ ದಂಡನೆ ಶಿಕ್ಷೆಗೆ ಗುರಿಯಾದವರನ್ನು ಇಲ್ಲಿಗೆ ಕರೆತಂದು ಪ್ರಪಾತಕ್ಕೆ ತಳ್ಳಲಾಗುತ್ತಿತ್ತು. ಈ ಜಾಗದಲ್ಲಿ ಪ್ರಸಕ್ತ ವರ್ಷ ಕೂಡ ಹಲವು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಅಧ್ಯಯನ ಮಾಡಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಹೇಳಿದ್ದಾರೆ.

ನಾವು ನಿಷೇಧಕ್ಕೆ ಪರವಾಗಿ ಇಲ್ಲ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಜನ ಇಲ್ಲಿಗೆ ಆಗಮಿಸುವುದಕ್ಕೆ ನಮ್ಮ ವಿರೋಧವಿದೆ.ಟಿಪ್ಪು ಡ್ರಾಪ್ ಬಳಿ ಒಬ್ಬ ಕಾವಲುಗಾರನನ್ನು ಖಾಯಂ ನಿಯೋಜಿಸಲಾಗಿದೆ. ಇಷ್ಟಾಗಿಯೂ ಪ್ರಪಾತಕ್ಕೆ ಹಾರುವ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ:
ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂಬ ನೆಪ ಒಡ್ಡಿ ಏಕಾಂಗಿಯಾಗಿ ಬರುವ ಪ್ರವಾಸಿಗರನ್ನು ತಡೆಯುವುದು ಸರಿಯಲ್ಲ. ಕೆಲಸದ ಒತ್ತಡದಿಂದ ವಿಶ್ರಾಂತಿ ಪಡೆದುಕೊಳ್ಳಲು ಬೆಂಗಳೂರಿನ ಸಾಫ್ಟ್‍ವೇರ್ ಇಂಜಿನಿಯರ್‍ಗಳು ಒಬ್ಬಂಟಿಗರಾಗಿ ರಜಾ ದಿನಗಳಲ್ಲಿ ಬರುತ್ತಾರೆ.ಬೆಳಗ್ಗಿನ ಜಾವ ಬಂದು ಸಂಜೆ ಹಿಂದಿರುತ್ತಾರೆ.ಇಂತಹವರಿಗೆ ಈ ನಿಷೇಧದಿಂದ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂದಿಬೆಟ್ಟದಲ್ಲಿ ಆತ್ಮಹತ್ಯೆ ನಡೆಯುತ್ತಿದ್ದರೆ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು.ಅದು ಬಿಟ್ಟು ಒಬ್ಬೊಬ್ಬರಾಗಿಬರುವ ಪ್ರವಾಸಿಗರನ್ನು ತಡೆಯುವುದು ಇದಕ್ಕೆ ಪರಿಹಾರವಲ್ಲ. ಇದು ಪ್ರವಾಸೋದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಾರಾಂತ್ಯದಲ್ಲಿ ನಾನು ಬೈಕ್‍ನಲ್ಲಿ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಇದರಲ್ಲಿ ನಂದಿಬೆಟ್ಟವೂ ಒಂದು.ಇಲ್ಲಿ ಬಂದು ಸ್ವಲ್ಪ ಹೊತ್ತು ಕುಳಿತರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಜನ ಆತ್ಮಹತ್ಯೆಗಾಗಿ ಇಲ್ಲಿಗೆ ಬರುತ್ತಾರೆ ಎಂದಾದರೆ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು. ವಿಶ್ವದ ಎಲ್ಲೂ ಇಂಥ ನಿಯಮಾವಳಿ ಇಲ್ಲ ಎಂದು ಏಕಾಂತವನ್ನು ಇಷ್ಟಪಡುವ ಸಾಫ್ಟ್‍ವೇರ್ ಇಂಜಿನಿಯರ್ ರಮೇಶ್ ಹೇಳಿದ್ದಾರೆ.

ಪೆÇಲೀಸ್ ವರದಿಯ ಆಧಾರದಲ್ಲಿ ನಿಷೇಧ :
ಪೆÇಲೀಸ್ ಇಲಾಖೆಯ ವರದಿಯ ಆಧಾರದಲ್ಲಿ ಈ ನಿಷೇಧ ಹೇರಲಾಗಿದೆ.ಏಕಾಂಗಿಯಾಗಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಇಂತಹವರ ಪ್ರವೇಶ ನಿರ್ಬಂಧಿಸಲು ಕ್ರಮಕೈಗೊಳ್ಳಬೇಕು ಎಂದು ಪೆÇಲೀಸ್ ಇಲಾಖೆ ವರದಿ ನೀಡಿತ್ತು.ಆದ್ದರಿಂದ ಈ ನೀತಿ ಜಾರಿಗೊಳಿಸಲಾಗಿದೆ.ಈ ಹಿಂದೆಯೇ ಇದು ಜಾರಿಯಲ್ಲಿತ್ತು.ಇದೀಗ ಇದನ್ನು ಇನ್ನಷ್ಟು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ