ಕಾರು ನಿಲ್ಲಿಸದ ಆಪಲ್ ಕಂಪನಿ ಉದ್ಯೋಗಿಗೆ ಗುಂಡಿಟ್ಟ ಪೊಲೀಸ್ ಪೇದೆ: ಉದ್ಯೋಗಿ ಸಾವು

Varta Mitra News

ಲಖನೌ: ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ಹಾರಿಸಿದ್ ಗುಂಡು ಆಪಲ್ ಕಂಪನಿ ಉದ್ಯೋಗಿಯನ್ನೇ ಬಲಿತೆಗೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಈನ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಪ್ರದೇಶದ ಗೋಮತಿ ನಗರದಲ್ಲಿ ರಾತ್ರಿ ಈ ಘಟನೆ ನಡೆದಿದ್ದು, ಮೃತರನ್ನು ಆ್ಯಪಲ್​ ಕಂಪನಿಯ ಉದ್ಯೋಗಿ ವಿವೇಕ್​ ತಿವಾರಿ ಎಂದು ಗುರುತಿಸಲಾಗಿದೆ.

ವಿವೇಕ್ ತಿವಾರಿ ಶುಕ್ರವಾರ ರಾತ್ರಿ ತನ್ನ ಸಹೊದ್ಯೋಗಿ ಜತೆ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಪೊಲೀಸರು ಕಾರನ್ನು ತಡೆಯಲು ಮುಂದಾಗಿದ್ದಾರೆ ಆದರೆ ಕಾರು ನಿಲ್ಲಿಸದ ವಿವೇಕ್ ಜೋರಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅನುಮಾನಗೊಂಡು ಪೇದೆ ಪ್ರಶಾಂತ್ ಚೌದರಿ ಕಾರಿನ ಬೆನ್ನು ಹತ್ತಿದ್ದಾರೆ. ವಿವೇಕ್ ಕಾರು ಪೊಲೀಸ್ ಪೇದೆಗಳ ಬೈಕ್ ಗೆ ಢಿಕ್ಕಿ ಹೊಡಿದೆದೆ. ಬಳಿಕ ಆಕ್ರೋಶಗೊಂಡ ಪೇದೆ ಚೌದರಿ ತಿವಾರಿ ಮೇಲೆ ಗುಂಡು ಹಾರಿಸಿದ್ದು, ಗುಂಡೇಟು ತಗುಲುತ್ತಿದ್ದಂತೆಯೇ ತಿವಾರಿ ಅಂಡರ್ ಪಾಸ್ ಪಿಲ್ಲರ್ ಗೆ ಕಾರು ಢಿಕ್ಕಿ ಹೊಡೆದಿದ್ದಾರೆ.

ಗುಂಡೇಟಿನ ಜತೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ವಿವೇಕ್ ನನ್ನು ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿವೇಕ್ ಸಾವನ್ನಪ್ಪಿದ್ದಾರೆ.

ಗುಂಡು ಹಾರಿಸಿದ ಪೇದೆ ಪ್ರಶಾಂತ್​ ಚೌದರಿ ಅವರ ವಿರುದ್ಧ ಸೆಕ್ಷನ್​ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೇದೆ ಪ್ರಶಾಂತ್​ ಚೌದರಿ ಮತ್ತು ಅವರ ಜತೆಗಿದ್ದ ಸಂದೀಪ್​ ಅವರನ್ನು ವಶಕ್ಕೆ ಪಡೆಯಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ