ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ: ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು, ಸೆ.22-ಬಿಜೆಪಿಯ ಆಪರೇಷನ್ ಕಮಲ ಠುಸ್ಸಾಗಿದೆ. ಅವರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂರ್ನಾಲ್ಕು ಡೆಡ್‍ಲೈನ್ ಕೊಟ್ಟಿದ್ದು, ಅವರು ಮಾಡಿದ ಯಾವುದೇ ಪ್ರಯತ್ನಗಳು ಫಲ ನೀಡದೆ ಕೈ ಕೊಟ್ಟಿವೆ ಎಂದರು.

ಪಕ್ಷದಲ್ಲಿ ಒಡಕು ಮೂಡಿಸುವುದು, ಭಿನ್ನಾಭಿಪ್ರಾಯ ಉಂಟು ಮಾಡುವುದೇ ಬಿಜೆಪಿಯವರ ಕೆಲಸ. ಈಗ ರಾಜ್ಯದಲ್ಲಿ ಬಹುಮತದ ಸರ್ಕಾರವಿದೆ. ಅದನ್ನು ತೆಗೆಯಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಫಲ ಸಿಗುವುದಿಲ್ಲ ಎಂದು ತಿಳಿಸಿದರು.

ಸಿಎಂ ದಂಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಾಗಲೇ ಅದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಮತ್ತೆ ವ್ಯಾಖ್ಯಾನ ಮಾಡುವುದು ಸರಿಯಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಕೇಂದ್ರಕ್ಕೂ ದೂರು ಕೊಡುತ್ತಾರೆ. ದೂರು ಕೊಡುವುದೇ ಅವರ ಕೆಲಸ. ಕೇಂದ್ರದಲ್ಲಿ ನಮ್ಮ ಅಧಿಕಾರವಿದೆ ಅಂತ ಎದುರಿಸುತ್ತಾರೆ. ಇದು ಅವರ ಸರ್ವಾಧಿಕಾರಿ ಧೋರಣೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಕೇಂದ್ರ ನಮ್ಮ ಕಡೆ ಇದೆ ಎಂದು ಬಿಎಸ್‍ವೈ ಹೇಳಿಕೆ ವಿಚಾರವನ್ನು ಗಮನಿಸಿದರೆ ಅವರಿಗೆ ನೀತಿ ನಿಯಮಗಳು ಮೇಲಿನಿಂದ ಬರುತ್ತವೆ. ಈಗಾಗಲೇ ಐಟಿ, ಇಡಿ ದಾಳಿಯನ್ನು ಡಿ.ಕೆ.ಶಿವಕುಮಾರ್ ಅವರ ಮೇಲೆ ಹೇಗೆ ಬಳಸಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ