ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುತ್ತಮುತ್ತ ಇರುವವರೇ ನಿಜವಾದ ಕಿಂಗ್‍ಪಿನ್ ಗಳು: ಶಾಸಕ ರೇಣುಕಾಚಾರ್ಯ

ಬೆಂಗಳೂರು, ಸೆ.15- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸುತ್ತಮುತ್ತ ಇರುವವರೇ ನಿಜವಾದ ಕಿಂಗ್‍ಪಿನ್‍ಗಳೆಂದು ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್‍ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಕುಮಾರಸ್ವಾಮಿ ಅವರಿಂದ ನಡೆಯುತ್ತಿದೆ. ನನ್ನ ಸರ್ಕಾರವನ್ನು ಕಿಂಗ್‍ಪಿನ್‍ಗಳ ಮೂಲಕ ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಗೇ ನೋಡಿದರೆ ಅವರ ಹಿಂದೆ, ಸುತ್ತಮುತ್ತ ಇರುವವರೇ ನಿಜವಾದ ಕಿಂಗ್‍ಪಿನ್‍ಗಳು. ಇಂಥವರಿಂದಲೇ ಸರ್ಕಾರಕ್ಕೆ ಅಸ್ಥಿರತೆ ಉಂಟಾಗಿದೆ ಎಂದು ದೂರಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಳ್ಳುವ ಹತಾಶೆ ಉಂಟಾಗಿದೆ. ಆದ್ದರಿಂದಲೇ ಪ್ರತಿಪಕ್ಷಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಮೊದಲು ನಿಮ್ಮ ಮನೆಯನ್ನು ಭದ್ರ ಮಾಡಿಕೊಂಡು ಬೇರೆಯವರ ಮೇಲೆ ಆರೋಪ ಮಾಡಿ. ಸರ್ಕಾರದಲ್ಲಿ ನಡೆಯುತ್ತಿರುವ ಭಿನ್ನಮತಕ್ಕೂ ಬಿಜೆಪಿಯೂ ಯಾವುದೇ ಸಂಬಂಧವಿಲ್ಲ. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಕೇಸ್ ಮಾಡುವುದನ್ನು ನಿಲ್ಲಿಸಬೇಕು. ನಮಗೂ ನಿಮ್ಮ ಮೇಲೆ ಆರೋಪ ಮಾಡಲು ಸಾಕಷ್ಟು ಪುರಾವೆಗಳಿವೆ ಎಂದು ತಿರುಗೇಟು ಕೊಟ್ಟರು.

ಸರ್ಕಾರ ಮುಂದುವರೆಯುವುದು ಅನೇಕರಿಗೆ ಇಷ್ಟವಿಲ್ಲ. ಜಾರಕಿಹೊಳಿ ಸಹೋದರರ ಭಿನ್ನಮತವನ್ನು ಬೇರೆಡೆ ತಿರುಗಿಸಲು ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇರುವವರು ಕ್ರಿಮಿನಲ್ಸ್ ಎನ್ನುವುದಾದರೆ ಗೋವಾದಲ್ಲಿ ಕ್ಯಾಸಿನೋ ನಡೆಸುವವರಿಗೆ ನೀವು ಟಿಕೆಟ್ ಕೊಟ್ಟಿಲ್ಲವೆ ಎಂದು ಪ್ರಶ್ನಿಸಿದರು.

ಮಾತುಕತೆ:
ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯರಾದ ಐಯನೂರು ಮಂಜುನಾಥ್, ರವಿಕುಮಾರ್, ರೇಣುಕಾಚಾರ್ಯ ಹಾಗೂ ಬೆಳಗಾವಿಯ ಶ್ರೀಗಳೊಬ್ಬರು ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದರು.
ನಿನ್ನೆ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಯಾವ ರೀತಿ ತಿರುಗೇಟು ನೀಡುವುದು ಹಾಗೂ 19ರಂದು ಕರೆದಿರುವ ಶಾಸಕಾಂಗ ಸಭೆ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ