ಲೋಕಸಭಾ ಚುನಾವಣೆ: ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆಯೇ ನಟ ಮೋಹನ್ ಲಾಲ್…?

ನವದೆಹಲಿ: ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಆರ್‌ಎಸ್‌ಎಸ್‌ ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ.

ನಟ ಮೋಹನ್‌ಲಾಲ್‌ ಅವರನ್ನು ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವಂತೆ ಕೇಳಲಾಗಿದೆ. ಅವರು ಬಿಜೆಪಿ ಸೇರಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.

ಮೋಹನ್‌ಲಾಲ್‌ರನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಆರ್‌ಎಸ್ಎಸ್‌ ಹೆಚ್ಚಿನ ಆಸಕ್ತಿ ವಹಿಸಿದೆ ಹಾಗೂ ಸಭೆ ನಡೆಸಿ ಚರ್ಚಿಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಆರ್‌ಎಸ್‌ಎಸ್‌ ಸಭೆಯ ಕುರಿತು ಬಿಜೆಪಿಗೆ ರಾಜ್ಯ ಘಟಕದ ಮುಖಂಡರಿಗೆ ಮಾಹಿತಿ ರವಾನೆಯಾಗಿಲ್ಲ.

ವೈಯನಾಡಿನಲ್ಲಿ ತಮ್ಮ ಫೌಂಡೇಷನ್‌ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಸೋಮವಾರ ಮೋಹನ್‌ಲಾಲ್‌ ದೆಹಲಿ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ಮೋಹನ್ ಲಾಲ್ ರಾಜಕೀಯ ಪ್ರವೇಶದ ಕುರಿತು ಹೇಳಿಕೆಗಳು ಹೆಚ್ಚಿವೆ.

ಮೋಹನ್‌ಲಾಲ್‌ ತನ್ನ ತಂದೆ ವಿಶ್ವನಾಥನ್‌ ನಾಯರ್‌ ಮತ್ತು ತಾಯಿ ಶಾಂತಾಕುಮಾರಿ ಅವರ ಸ್ಮರಣಾರ್ಥ ವಿಶ್ವಶಾಂತಿ ಫೌಂಡೇಷನ್‌ ಸ್ಥಾಪಿಸಿದ್ದಾರೆ. ವೈಯನಾಡಿನಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಸಂಸ್ಥೆ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ಅವರನ್ನು ಆಹ್ವಾನಿಸಲಾಗಿದೆ. ಪ್ರವಾಹ ಪರಿಹಾರ ಕಾರ್ಯಗಳಲ್ಲಿ ವಿಶ್ವಶಾಂತಿ ಫೌಂಡೇಷನ್‌ ಆರ್‌ಎಸ್‌ಎಸ್‌ನ ಸೇವಾ ಭಾರತಿಯೊಂದಿಗೆ ಕೈಜೋಡಿಸಿದೆ.

ಕೇರಳದಲ್ಲಿ ಮೋಹನ್‌ಲಾಲ್‌ ನಟನಾಗಿ ಹೆಸರು ಮಾಡಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಸಮಾಜಸೇವೆಯಲ್ಲೂ ಹೆಸರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆಸುವ ಪ್ರಯತ್ನವಾಗಿ ಆರ್ ಎಸ್ ಎಸ್ ಬಿಜೆಪಿಗೆ ಎಳೆದುಕೊಳ್ಳುವ ತಂತ್ರ ಹೆಣೆದಿದೆ ಎನ್ನಲಾಗಿದೆ.

ಕೇರಳ ಬಿಜೆಪಿ ಮಾಜಿ ಮುಖಂಡ ಕುಮ್ಮನಾಂ ರಾಜಶೇಖರನ್‌ ಅವರನ್ನು ತಿರುವನಂತಪುರನಿಂದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿಲು ನಿರ್ಧರಿಸಲಾಗಿತ್ತು. ಆದರೆ, ಮಿಜೋರಾಂ ರಾಜ್ಯಪಾಲರಾಗಿ ರಾಜಶೇಖರನ್‌ ನೇಮಕವಾಗಿರುವ ಕಾರಣದಿಂದ ಆ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆರ್‌ಎಸ್ಎಸ್‌ ಪ್ರಯತ್ನಿಸುತ್ತಿದೆ.

ಕೇರಳದಲ್ಲಿ ಬಿಜೆಪಿ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಂಡಿದೆಯಾದರೂ, ಇದುವರೆಗೂ ಯಾವುದೇ ಪ್ರಮುಖ ಚುನಾವಣೆಗಳಲ್ಲಿ ಪ್ರಭಾವಶಾಲಿಯಾಗಿ ಹೊರಹೊಮ್ಮಿಲ್ಲ. ಕೇಸರಿ ಪಕ್ಷವು ಈಗಾಗಲೇ ಮಲಯಾಳಂ ನಟ ಸುರೇಶ್ ಗೋಪಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ.ಈಗ ಮೋಹನ್ ಲಾಲ್ ಅವರ ಸೇರ್ಪಡೆಯಿಂದ ಕೇರಳದಲ್ಲಿ ಬಲಪಡಿಸಿಕೊಳ್ಳುವುದು ಬಿಜೆಪಿ ತಂತ್ರ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ