ಕೇಂದ್ರಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ. ಬಿಡುಗಡೆಮಾಡಬೇಕು: ವಾಟಾಳ್ ನಾಗರಾಜ್ ಆಗ್ರಹ

 

ಬೆಂಗಳೂರು, ಆ.21-ಪ್ರಕೃತಿ ವಿಕೋಪದಿಂದ ಹಾಳಾಗಿರುವ ಕೊಡಗನ್ನು ಪುನರ್ ನಿರ್ಮಾಣಮಾಡಲು ಕೇಂದ್ರಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ. ಬಿಡುಗಡೆಮಾಡಬೇಕು. ಪ್ರಧಾನಿ ನರೇಂದ್ರಮೋದಿಯವರು ಕೊಡಗಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪಾಲಿಕೆ ಕಚೇರಿಯ ಎದುರು ಇಂದು ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಪ್ರಳಯದಿಂದ ಜರ್ಝರಿತವಾಗಿರುವ ಕೊಡಗಿನ ಜನರ ನೆರವಿಗೆ ನಾವೆಲ್ಲರೂ ಧಾವಿಸಬೇಕಿದೆ. ನವ ಕೊಡಗು ನಿರ್ಮಾಣ ಮಾಡಬೇಕಿದೆ. ಕೇಂದ್ರಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಕೂಡಲೇ ಒಂದು ಸಾವಿರ ಶೌಚಾಲಯ ನಿರ್ಮಾಣ ಮಾಡಬೇಕು, ಮನೆಗಳನ್ನು ಕಟ್ಟಿಕೊಡಬೇಕು. ನಿರಾಶ್ರಿತ ಶಿಬಿರದಲ್ಲಿರುವವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇಲ್ಲಿನ ಜನರ ಬದುಕು ಮೂರಾಬಟ್ಟೆಯಾಗಿದೆ. ಜನಪ್ರತಿನಿಧಿಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಜನರ ನೋವಿಗೆ ಸ್ಪಂದಿಸುವಂತೆ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ