ಸರ್ಕಾರಿ ಸೌಮ್ಯದ ವಿವಿಧ ಸಂಸ್ಥೆಗಳಿಂದ ಇಂದು 3.75 ಕೋಟಿ ರೂ. ಆರ್ಥಿಕ ನೆರವು

 

ಬೆಂಗಳೂರು, ಆ.21- ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ಸಹಾಯಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಸೌಮ್ಯದ ವಿವಿಧ ಸಂಸ್ಥೆಗಳಿಂದ ಇಂದು 3.75 ಕೋಟಿ ರೂ. ಆರ್ಥಿಕ ನೆರವು ಸಲ್ಲಿಕೆಯಾಗಿದೆ.

ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರ್ಥಿಕ ನೆರವಿನ ಚೆಕ್‍ಗಳನ್ನು ಹಸ್ತಾಂತರಿಸಿದರು.
ಎಂಎಸ್‍ಐಎಲ್‍ನಿಂದ ಒಂದು ಕೋಟಿ, ಎಂಇಐ ಸಂಸ್ಥೆಯಿಂದ 25ಲಕ್ಷ, ಕೆಐಇಡಿಬಿಯಿಂದ ಒಂದು ಕೋಟಿ, ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವಿಟೇಜ್‍ಮೆಂಟ್ ಲಿಮಿಟೆಡ್‍ನಿಂದ ಒಂದೂವರೆ ಕೋಟಿ ಸೇರಿ ಒಟ್ಟು 3.75 ಕೋಟಿ ರೂ.ಗಳನ್ನು ಸಲ್ಲಿಸಲಾಯಿತು. ಇದರಲ್ಲಿ ಎರಡು ಕೋಟಿ ರೂ.ಗಳನ್ನು ನೈಸರ್ಗಿಕ ಪ್ರಕೃತಿ ವಿಕೋಪ ನಿಧಿಗೆ ಹಾಗೂ ಒಂದೂವರೆ ಕೋಟಿ ರೂ.ವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಂಚಿಕೆ ಮಾಡಲಾಗಿದೆ.
ಜತೆಗೆ ಯಶ್‍ಟೆಲ್ ಸಂಸ್ಥೆಯಿಂದ ಸುಮಾರು 25 ಲಕ್ಷ ರೂ. ದೇಣಿಗೆ ನೀಡಲಾಗಿದ್ದು, ಸರ್ಕಾರ ಸೂಚಿಸಿದ ಎರಡು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಸಂಸ್ಥೆಯ ಮುಖ್ಯಸ್ಥರು ಭರವಸೆ ನೀಡಿದ್ದಾರೆ. ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸ್‍ಮೂರ್ತಿ ಮತ್ತು ಸ್ನೇಹಿತರು 2.60ಲಕ್ಷ ದೇಣಿಗೆಯನ್ನು ನೀಡಿದ್ದಾರೆ.

ಚೆಕ್‍ಗಳನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆನ್‍ಲೈನ್ ಪೇಮೆಂಟ್ ಮೂಲಕ 29 ಲಕ್ಷ ರೂ. ದೇಣಿಗೆ ಬಂದಿದೆ. ಒಂದು ವಾರದಲ್ಲಿ ಎಲ್ಲಾ ಮಾಹಿತಿಯನ್ನು ಕ್ರೋಢಿಕರಿಸಿ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.
ಸಂಪೂರ್ಣ ಮಾಹಿತಿ ಸಂಗ್ರಹಿಸಿದ ನಂತರ ಕೊಡಗು ಅಥವಾ ಇತರೆ ಜಿಲ್ಲೆಗಳಲ್ಲಿ ಮಳೆಯಿಂದಾಗಿರುವ ನಷ್ಟಗಳ ಬಗ್ಗೆ ವರದಿ ಸಿದ್ದಪಡಿಸಿ, ಪ್ರಧಾನಿ ಅವರಿಗೆ ಸಲ್ಲಿಸುವ ಮೂಲಕ ಹೆಚ್ಚುವರಿ ನೆರವು ಪಡೆದುಕೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ