ಬ್ಯಾಂಕ್ ಠೇವಣಿದಾರರ ಆತಂಕಕ್ಕೆ ಫುಲ್‌ಸ್ಟಾಪ್

ಹೊಸದಿಲ್ಲಿ : ತೀವ್ರ ವಿವಾದಕ್ಕೀಡಾಗಿದ್ದ ಎಫ್‌ಆರ್‌ಡಿಐ ವಿಧೇಯಕವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಗಳವಾರ ಹಿಂತೆಗೆದುಕೊಂಡಿದೆ.

ವಿಧೇಯಕದಲ್ಲಿನ ‘ಬೈಲಾ-ಇನ್‌’ ನಿಯಮಾವಳಿಗಳು ವಿವಾದಕ್ಕೆ ಸಿಲುಕಿತ್ತು. ಇದರಿಂದ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭ ಬಳಕೆದಾರರ ಠೇವಣಿಯನ್ನು ಸರಕಾರವು ತಾತ್ಕಾಲಿಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಇದರಿಂದ ಗ್ರಾಹಕರ ಠೇವಣಿಯ ಸುರಕ್ಷಿತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಲಾಗಿತ್ತು. ಸರಕಾರ, ಗ್ರಾಹಕರ ಹಣ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಂಪೂರ್ಣ ಸುರಕ್ಷಿತ ಎಂದು ಸ್ಪಷ್ಟನೆ ನೀಡಿದರೂ, ವಿವಾದ ತಣ್ಣಗಾಗಿರಲಿಲ್ಲ. ಇವೆಲ್ಲದರ ಪರಿಣಾಮ ವಿಧೇಯಕವನ್ನೇ ಸರಕಾರ ಇದೀಗ ಹಿಂತೆಗೆದುಕೊಂಡಿದೆ.

2017ರ ಆಗಸ್ಟ್‌ 10ರಂದು ಈ ಹಣಕಾಸು ನಿರ್ಣಯ ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಂಸತ್ತಿನ ಜಂಟಿ ಸಂಸದೀಯ ಸಮಿತಿ ಅಧ್ಯಯನಕ್ಕೆ ಸಲ್ಲಿಸಲಾಗಿತ್ತು. ಹಣಕಾಸು ಖಾತೆ ಸಹಾಯಕ ಸಚಿವ ಪಿ. ರಾಧಾಕೃಷ್ಣನ್‌ ವಿಧೇಯಕ ಹಿಂತೆಗೆತದ ಪ್ರಸ್ತಾಪ ಮಂಡಿಸಿದರು ಹಾಗೂ ಅದನ್ನು ಅನುಮೋದಿಸಲಾಯಿತು.

ಹಿಂತೆಗೆತಕ್ಕೆ ಕಾರಣವೇನು?

ಉದ್ದೇಶಿತ ಎಫ್‌ಆರ್‌ಡಿಐ ವಿಧೇಯಕದಲ್ಲಿನ ‘ಬೈಲಾ-ಇನ್‌’ ಪ್ರಸ್ತಾವದ ಬಗ್ಗೆ ಯೋಜನೆಯ ಪಾಲುದಾರರೂ ಆಗಿರುವ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿರುವುದೇ ವಿಧೇಯಕವನ್ನು ಹಿಂತೆಗೆದುಕೊಳ್ಳಲು ಕಾರಣ ಎಂದು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಜನರಲ್ಲಿದ್ದ ಆತಂಕವೇನು? 

ಯಾವುದಾದರೂ ಬ್ಯಾಂಕ್‌ ದಿವಾಳಿಯಾದಾಗ ಬ್ಯಾಂಕ್‌ಗಳು ನಷ್ಟವನ್ನು ತಡೆಯಲು ಠೇವಣಿದಾರರ ಹಣವನ್ನೂ ಬಳಸಬಹುದು ಎಂಬ ವದಂತಿ ಹಬ್ಬಿ ಜನರಲ್ಲಿ ಆತಂಕ ಉಂಟಾಗಿತ್ತು. ವಿಧೇಯಕ ವಿರುದ್ಧ ಆನ್‌ಲೈನ್‌ ಅಭಿಯಾನವೊಂದಕ್ಕೆ 70 ಸಾವಿರ ಸಹಿ ಸಂಗ್ರಹವಾಗಿತ್ತು. ಆತಂಕಿತ ಜನ ಎಟಿಎಂಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಗದು ಹಿಂತೆಗೆತವನ್ನೂ ಮಾಡಿದ್ದರೆಂದು ವರದಿಯಾಗಿತ್ತು.

ವಿಧೇಯಕವು ಬ್ಯಾಂಕ್‌ಗಳ ದಿವಾಳಿ ಪ್ರಕ್ರಿಯೆಗಳ ಸುಧಾರಣೆಗೆ ಸಂಬಂಧಿಸಿತ್ತು. ಇದಕ್ಕಾಗಿ ಪ್ರತ್ಯೇಕ ಪ್ರಾಧಿಕಾರದ ರಚನೆಗೂ ಅವಕಾಶ ಕಲ್ಪಿಸಿತ್ತು. ವಿಧೇಯಕದ ಪ್ರಕಾರ, ಬ್ಯಾಂಕ್‌ ವಿಫಲವಾದಾಗ ಗ್ರಾಹಕರಿಗೆ ಠೇವಣಿ ವಿಮೆ ಕಲ್ಪಿಸಿದ್ದರೂ. ಮೊತ್ತ ಎಷ್ಟು ಎಂಬ ಸ್ಪಷ್ಟತೆ ಇರಲಿಲ್ಲ. ಸದ್ಯಕ್ಕೆ ಬ್ಯಾಂಕ್‌ಗಳಲ್ಲಿ ಗ್ರಾಹಕರ ಠೇವಣಿಗೆ 1 ಲಕ್ಷ ರೂ. ತನಕ ವಿಮೆ ಸೌಕರ್ಯವಿದೆ.

ಎಫ್‌ಆರ್‌ಡಿಐ ವಿಧೇಯಕವು ಠೇವಣಿದಾರರ ಸ್ನೇಹಿಯಾಗಿದ್ದು, ಅವರ ಹಣ ಸುರಕ್ಷಿತ ಎಂದು ಸರಕಾರ ಹೇಳಿದ್ದರೂ, ಆತಂಕ ನಿವಾರಣೆಯಾಗಿರಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ