ಯೋಗಿ ಆನ್ ದಲಾಲ್ ಸ್ಟ್ರೀಟ್ ಬಿಡುಗಡೆ

 

ಬೆಂಗಳೂರು, ಆ.2- ಎಕ್ಸಿಸ್ ಸೆಕ್ಯೂರಿಟೀಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಅರುಣ್ ಥುಕ್ರಾಲ್ ಅವರು ಬರೆದಿರುವ ಯೋಗಿ ಆನ್ ದಲಾಲ್ ಸ್ಟ್ರೀಟ್ ಪುಸ್ತಕವನ್ನು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್ ಬಿಡುಗಡೆ ಮಾಡಿದರು.
ಬಂಡವಾಳ ಹೂಡಿಕೆಯ ಬಗ್ಗೆ ಮೂಲಭೂತ ಅಂಶಗಳಿಂದ ಆಳವಾಗಿ ತಿಳಿದುಕೊಂಡು ಸೂಕ್ತವಾದ ರೀತಿಯಲ್ಲಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಹೇಗೆಂಬುದನ್ನು ಇಡೀ ಪುಸ್ತಕ ತಿಳಿಸಿಕೊಡುತ್ತದೆ.
ವಿಶೇಷವಾಗಿ ಯೋಗ ಸೂತ್ರವನ್ನು ಉಲ್ಲೇಖಿಸಲಾಗಿದೆ. ಮನುಷ್ಯನ ವರ್ತನೆ ಮೇಲೆ ನೇರವಾಗಿ ಪರಿಣಾಮ ಬೀರಬಹುದಾದ 22 ಸೂತ್ರಗಳ ಆಧಾರದಲ್ಲಿ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.
ಗುಣಾತ್ಮಕ ಚಿಂತನೆಗಳೊಂದಿಗೆ ಮನುಷ್ಯ ಅಥವಾ ಹೂಡಿಕೆದಾರನನ್ನು ಆರ್ಥಿಕ ಕ್ಷೇತ್ರದಲ್ಲಿ ಶಕ್ತಿಯುತನನ್ನಾಗಿ ಮಾಡುವುದು ಮತ್ತು ನಕಾರಾತ್ಮಕ ಚಿಂತನೆಗಳನ್ನು ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸುವ ಅಂಶಗಳು ಇದರಲ್ಲಿ ಅಡಕವಾಗಿದೆ.
ಈ ಮೂಲಕ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿ ಯಶಸ್ಸು ಸಾಧಿಸುವುದು ಹೇಗೆಂಬುದರ ಮಾಹಿತಿ ಇದರಲ್ಲಿದೆ. ಆಧುನಿಕ ಜಗತ್ತಿನ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲೆಂದೇ ಈ ಪುಸ್ತಕವನ್ನು ರಚಿಸಲಾಗಿದೆ.
ಈ ಪುಸ್ತಕವನ್ನು ಓದುವ ಯಾವುದೇ ವ್ಯಕ್ತಿಯು ತನ್ನ ಆರ್ಥಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಷೇರುಪೇಟೆಯ ಪರಿಣತರಾದ ವಲ್ಲಭ ಬನ್ಸಾಲಿ, ನಿಲೇಶ್ ಶಾ ಮತ್ತು ಯೋಗ ಸಂಸ್ಥೆಯ ನಿರ್ದೇಶಕರಾದ ಹನ್ಸ್‍ರಾಜ್ ಜಯದೇವ ಯೋಗೇಂದ್ರ ಅವರು ಈ ಪುಸ್ತಕ ಅತ್ಯುತ್ತಮವಾದ ಮಾಹಿತಿ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಕ್ಸಿಸ್ ಸೆಕ್ಯೂರಿಟೀಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಅರುಣ್ ಥುಕ್ರಾಲ್ ಮಾತನಾಡಿ, ಹಣಕಾಸು ಕ್ಷೇತ್ರದ ವೃತ್ತಿಪರನಾಗಿ ಕೆಲಸ ಮಾಡುತ್ತಿರುವ ನಾನು ಹೂಡಿಕೆದಾರರು ತಮ್ಮ ಆರ್ಥಿಕ ಗುರಿಗಳನ್ನು ತಲುಪಲು ಹೂಡಿಕೆಗಳು ಸೂಕ್ತವಾದ ವೇದಿಕೆ ಎಂದು ನಂಬಿದ್ದೇನೆ ಎಂದು ಹೇಳಿದರು.
ಹೂಡಿಕೆಗೆ ಸೂಕ್ತ ವಾತಾವರಣ ಇದ್ದಾಗ್ಯೂ ಭಾರತದಲ್ಲಿ ಇನ್ನೂ ಶೇ.5ರಷ್ಟು ಜನರು ಮಾತ್ರ ಷೇರುಪೇಟೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಇನ್ನೂ ಹೆಚ್ಚಿನ ಜನರು ಷೇರುಪೇಟೆಯಲ್ಲಿ ಅಥವಾ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದೇನೆ ಎಂದರು.
ಈ ಕಾರಣದಿಂದಲೇ ಯೋಗಿ ಆನ್ ದಲಾಲ್ ಸ್ಟ್ರೀಟ್ ಪುಸ್ತಕವನ್ನು ಬರೆದಿದ್ದು, ಷೇರುಗಳ ಮೇಲೆ ಹೂಡಿಕೆ ಮಾಡಲು ಇರುವ ಅವಕಾಶಗಳು ಮತ್ತು ಅದರಿಂದ ಆಗುವ ಪ್ರಯೋಜನಗಳನ್ನು ಯೋಗ ಸೂತ್ರಗಳ ಆಧಾರದಲ್ಲಿ ವಿವರಿಸಿದ್ದೇನೆ. ಪ್ರಮಾಣೀಕೃತ ಯೋಗ ಅಭ್ಯಾಸ ಮಾಡುತ್ತಿರುವ ನಾನು ಯೋಗದ ತತ್ವಗಳು ಮತ್ತು ಹೂಡಿಕೆದಾರನ ಮಾನಸಿಕ ಸ್ಥಿತಿಯ ನಡುವೆ ಒಂದು ಆಳವಾದ ಸಂಬಂಧ ಇದೆ ಎಂಬುದನ್ನು ಪತ್ತೆ ಮಾಡಿದ್ದೇನೆ. ಇದೇ ಆಧಾರದಲ್ಲಿ ಪುಸ್ತಕವನ್ನು ಸಿದ್ಧಪಡಿಸಿದ್ದು, ಎಲ್ಲಾ ಹೂಡಿಕೆದಾರರಿಗೆ ಈ ಪುಸ್ತಕ ನೆರವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ