ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಕೃಷ್ಣಾನದಿಗೆ ನೀರಿನ ಹರಿಯುವಿಕೆ ಹೆಚ್ಚಳ

ಚಿಕ್ಕೋಡಿ,ಜು.18- ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕೃಷ್ಣಾನದಿಗೆ ನೀರಿನ ಹರಿಯುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಯಭಾಗ ತಾಲ್ಲೂಕಿನ ಕುಡಚಿ ಉಗಾರದ ಮಧ್ಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಉಗಾರ-ಕುಡಚಿ ಸಂಪರ್ಕ ಕಡಿತವಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾನದಿಗೆ 1.70 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ರಾಜಾಪೂರೆ ಬ್ಯಾರೇಜ್‍ನಿಂದ 1.12 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಅಲ್ಲದೆ ದೂಧಗಂಗಾ ನದಿಯಿಂದ 40 ಸಾವಿರ ಕ್ಯೂಸೆಕ್‍ನಷ್ಟು ನೀರು ಹರಿದುಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ 7 ಸೇತುವೆಗಳು ಜಲಾವೃತಗೊಂಡಿವೆ. 4 ಅಡಿಯಷ್ಟು ನೀರು ಸೇತುವೆಗಳ ಮೇಲೆ ಹರಿಯುತ್ತಿರುವುದರಿಂದ ಸಂಚಾರಕ್ಕೆ ಪರದಾಡುವಂತಾಗಿದೆ. ಬಾಗಲಕೋಟೆ, ಜಮಖಂಡಿ, ರಾಯಭಾಗ, ಹಾರೋಗೇರಿ ಪಟ್ಟಣದ ಜನರು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಈ ಸೇತುವೆ ಮೂಲಕವೇ ಹೋಗಬೇಕಾಗಿದೆ. ಆದರೆ ಇದೀಗ ಜಲಾವೃತವಾಗಿರುವುದರಿಂದ ಜನರು ಪರದಾಡುತ್ತಿದ್ದು, 50 ಕಿ.ಮೀ ಬಳಸಿ ಅಥಣಿ ಮಾರ್ಗವಾಗಿ ಹೋಗುತ್ತಿದ್ದಾರೆ. ಭಾರೀ ಮಳೆಯಿಂದಾಗಿ ಅಥಣಿ, ಚಿಕ್ಕೋಡಿ, ರಾಯಭಾಗ ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ