ಜೆಡಿಎಸ್ ನಿಜವಾದ ಹಿಂದುತ್ವವಾದಿಗಳು

 

ಬೆಂಗಳೂರು, ಜು.12-ಬಿಜೆಪಿಯವರು ಹಿಂದುತ್ವವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಹಿಂದುತ್ವವಾದಿಗಳು ಜೆಡಿಎಸ್‍ನವರು ಎಂದು ಬಿಜೆಪಿ ಶಾಸಕ ನರಸಿಂಹಯ್ಯ ನಾಯಕ್ ಹೇಳಿ ಅಚ್ಚರಿ ಮೂಡಿಸಿದರು.
ವಿಧಾನಸಭೆಯ ಬಜೆಟ್ ಮೇಲಿನ ಚರ್ಚೆ ಮೇಲೆ ಮಾತನಾಡಿದ ಅವರು, ನಾವು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ತುಂಬಾ ಪ್ರಯತ್ನ ಪಟ್ಟೆವು. ಆದರೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ರೇವಣ್ಣ ಅವರು ಮಾಡಿದ ಯಜ್ಞ, ಯಾಗಾದಿಗಳ ಫಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ತಾವು ಹಿಂದುತ್ವವಾದಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಹಿಂದುತ್ವವಾದಿ ರೇವಣ್ಣ ಅವರು ಎಂದು ಹೇಳಿ ಅಚ್ಚರಿ ಮೂಡಿಸಿದರು.
ಹೀಗಾಗಿ ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಹೋಮ-ಹವನಗಳಿಗೆ ಶೇ.20ರಷ್ಟು ಹಣ ಮೀಸಲಿಡಬೇಕೆಂದು ಒತ್ತಾಯಿಸಿದರು.
ನಾರಾಯಣಪುರ ಎಡದಂಡೆ, ಬಲದಂಡೆ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಭತ್ತ ಬೆಳೆದರೆ ಅಧಿಕಾರಿಗಳು ಭತ್ತದ ಮೌಲ್ಯಕ್ಕಿಂತಲೂ ದುಬಾರಿ ದಂಡ ವಿಧಿಸುತ್ತಿದ್ದಾರೆ. ದಯವಿಟ್ಟು ನಿಷೇಧವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಎಲ್ಲಾ ಸರ್ಕಾರಗಳು ಹೊಸ ಹೊಸ ಜಾತಿಗಳನ್ನು ಸೇರ್ಪಡೆ ಮಾಡುತ್ತಿವೆ. ಇದರಿಂದ ಪರಿಶಿಷ್ಟ ಪಂಗಡದಲ್ಲಿನ ಮೀಸಲಾತಿ ಪಾಲುದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಮೀಸಲಾತಿ ಪ್ರಮಾಣ ಮಾತ್ರ ಹೆಚ್ಚಾಗುತ್ತಿಲ್ಲ. ಹಿಂದುಳಿದ ವರ್ಗಗಳು ಹಾಗೂ ಇತರ ಮೀಸಲಾತಿ ವ್ಯಾಪ್ತಿಯಲ್ಲಿರುವ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಾಗ ಆ ವರ್ಗದಲ್ಲಿ ಸದರಿ ಜಾತಿಗಳು ಪಡೆಯುತ್ತಿದ್ದ ಮೀಸಲಾತಿಯ ಪ್ರಮಾಣ ಕಡಿಮೆ ಮಾಡಿ ಅದನ್ನು ಎಸ್ಟಿಗೆ ಸೇರಿಸಬೇಕು ಎಂದು ನರಸಿಂಹ ನಾಯಕ್ ಒತ್ತಾಯಿಸಿದರು.
ವಸತಿ ಇಲಾಖೆಯಲ್ಲಿ ಮನೆಗಳ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಲು ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ನೋಡಲ್ ಅಧಿಕಾರಿಗಳಿಗೆ ಸಂಬಳ ನೀಡದೆ ಅತಂತ್ರಗೊಳಿಸಲಾಗಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ