ಏರ್’ಸೆಲ್ ಮ್ಯಾಕ್ಸಿಸ್ ಹಗರಣ: ಆ.7ವರೆಗೆ ಚಿದಂಬರಂ, ಕಾರ್ತಿರನ್ನು ಬಂಧಿಸುವಂತಿಲ್ಲ; ದೆಹಲಿ ನ್ಯಾಯಾಲಯ

ನವದೆಹಲಿ: ಏರ್’ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಆ.7ರವರೆಗೂ ಬಂಧಿಸುವಂತಿಲ್ಲ ಎಂದು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.
ಪ್ರಕರಣ ಕುರಿತಂತೆ ಕಳೆದ ಜೂನ್ 5 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಜುಲೈ.10ವರೆರೆಗೆ ಚಿದಂಬಂರಂ ಅವರನ್ನು ಬಂಧಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಹೊರಡಿಸಿತ್ತು.
ಮಧ್ಯಂತರ ಆದೇಶ ಇಂದಿಗೆ ಅಂತ್ಯವಾದ ಹಿನ್ನಲೆಯಲ್ಲಿ ಇಂದು ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ, ಮತ್ತೆ ಚಿದಂಬರಂ ಹಾಗೂ ಕಾರ್ತಿಯವರಿಗೆ ಆ.7ರವರೆಗೂ ನಿರಾಳ ನೀಡಿದೆ.
ಏರ್’ಸೆಲ್ ಮ್ಯಾಕ್ಸಿಸ್ ಪ್ರಕರಣವು 2ಜಿ ಸ್ಪೆಕ್ಟ್ರಂ ಪ್ರಕರಣದಿಂದ ಹೊರಬಂದ ಹಗರಣವಾಗಿದೆ. ಏರ್’ಸೆಲ್’ಗೆ ಹೂಡಿಕೆ ಮಾಡಲು ಎಂ/ಎಸ್ ಗ್ಲೋಬರ್ ಕಮ್ಯುನಿಕೇಷನ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್’ಗೆ ಫಾರಿನ್ ಇನ್ವೆಸ್ಟ್ ಮೆಂಟ್ ಬೋರ್ಡ್ ಸಮ್ಮತಿ ನೀಡಿದ್ದ ಆರೋಪ ಪ್ರಕರಣ ಇದಾಗಿದ್ದು, 2006ರಲ್ಲಿ ನಡೆದ ರೂ.600 ಕೋಟಿಯ ಈ ವ್ಯವಹಾರದ ಹಿಂದೆ ಪಿ.ಚಿದಂಬರಂ ಅವರ ಕೈವಾಡವಿದೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ