ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಕೃಷಿ ಸಚಿವರ ಸಮರ್ಥನೆ

ಬೆಳಗಾವಿ,ಜು.7- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಸಮರ್ಥಿಸಿಕೊಂಡಿರುವ ಕೃಷಿ ಸಚಿವ ಎಚ್.ಎನ್.ಶಿವಶಂಕರ ರೆಡ್ಡಿ , ಅನ್ಯಾಯವಾಗಿದ್ದರೆ ಮುಂದಿ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ಫೈನಲ್ ಅಲ್ಲ. ಅನ್ಯಾಯವಾಗಿದ್ದರೆ ಪೂರಕ ಬಜೆಟ್‍ನಲ್ಲಿ ನ್ಯಾಯ ಒದಗಿಸಲು ಅವಕಾಶವಿದೆ. ಅನಗತ್ಯ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬಜೆಟ್ ಬಗ್ಗೆ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್ ಅವರು ಯಾವ ಆಧಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ವಿಪಕ್ಷದವರು ಅವರ ಹೇಳಿಕೆಗೆ ಬಣ್ಣ ಹಚ್ಚಿ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ.
ನಮ್ಮ ಸರ್ಕಾರ 34000 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಅದು ಹಾಸನ, ರಾಮನಗರ, ಮೈಸೂರು ಜಿಲ್ಲೆಗಳ ರೈತರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ರೈತರ ಸಾಲಮನ್ನಾ ಆಗಿದೆ ಎಂದು ಹೇಳಿದರು.
ರಾಜ್ಯ ಬಜೆಟ್‍ನಿಂದ ಕೆಲವರಿಗೆ ಅಸಮಾಧಾನವಾಗಿದೆ. ಅವರ ಹೇಳಿಕೆಗಳಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿ ಧಕ್ಕೆಯಾಗುವುದಿಲ್ಲ. ಸುಭದ್ರವಾಗಿ ಐದು ವರ್ಷ ನಮ್ಮ ಸರ್ಕಾರ ನಡೆಯುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ