ಸಿಲಿಂಡರ್ ಸಿಡಿದು ಮೂವರು ಗಾಯ

ಕನಕಪುರ, ಜೂ.29- ಗ್ಯಾಸ್ ಸ್ಟವ್ ಸಿಲಿಂಡರ್ ಸಿಡಿದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮೆಜಸ್ಟಿಕ್ ಸರ್ಕಲ್ ಬಳಿಯ ಕುಂಬಾರ ಬೀದಿಯಲ್ಲಿ ನಡೆದಿದೆ. ಗೌರಮ್ಮ(55), ಮಗ ಶಿವ(35) ಮತ್ತು ಅಳಿಯ ಮಹದೇವು (44) ಗಾಯಗೊಂಡವರು.
ಇವರು ರಾತ್ರಿ ವೇಳೆ ಪಟ್ಟಣದ ಹೆರಿಗೆ ಆಸ್ಪತ್ರೆ ಬಳಿ ಕ್ಯಾಂಟೀನ್ ನಡೆಸುತ್ತಿದ್ದರು. ಅದಕ್ಕಾಗಿ ಮಧಾಹ್ನ ಅಡುಗೆ ತಯಾರು ಮಾಡುತ್ತಿದ್ದಾಗ ಗ್ಯಾಸ್‍ಸ್ಟವ್ ಸಿಲಿಂಡರ್ ಹೊತ್ತಿಕೊಂಡು ಈ ಘಟನೆ ನಡೆದಿದೆ. ಗೌರಮ್ಮ ಗಂಭೀರ ಗಾಯಗೊಂಡಿದ್ದಾರೆ. ಶಿವು ಮತ್ತು ಅಳಿಯ ಮಹದೇವು ಸಹ ಗಾಯಗೊಂಡಿದ್ದಾರೆ.
ಸಿಲಿಂಡರ್ ಸಿಡಿದ ತಕ್ಷಣ ಕೂಗಿ ಕೊಂಡಾಗ ಅಕ್ಕಪಕ್ಕದ ಮನೆಯವರು ಬಂದು ಅವರನ್ನು ರಕ್ಷಣೆ ಮಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಲಾಯಿತು. ತಕ್ಷಣ ಅಗ್ನಿ ಶಾಮಕ ದಳವನ್ನು ಕರೆಸಿ ಹೊತ್ತಿಕೊಂಡಿದ್ದ ಸಿಲಿಂಡರ್‍ನಂದಿಸಲಾಯಿತು. ಇದರಿಂದ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ ಎಂದು ಸಾರ್ವಜನಿಕರು ತಿಳಿಸಿದರು. ಗೌರಮ್ಮ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಮಲ್ಲೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ