ಯೋಗಭ್ಯಾಸ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

 

ಬೆಂಗಳೂರು, ಜೂ.21-ವಿದ್ಯಾರ್ಥಿಗಳ ವಿಕಾಸಕ್ಕೆ ಯೋಗಭ್ಯಾಸ ವ್ಯಾಯಾಮ ಅಗತ್ಯವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಯೋಗ ಪ್ರದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗ ಮತ್ತು ವ್ಯಾಯಾಮಗಳನ್ನು ಶಾಲೆಗಳಲ್ಲಿ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಆದರೆ, ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವ್ಯಾಯಾಮ ಮಾಡಲು ಆಟದ ಮೈದಾನಗಳೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸ ಶಾಲೆಗಳನ್ನು ಆರಂಭಿಸುವಾಗ ಕಡ್ಡಾಯವಾಗಿ ಆಟದ ಮೈದಾನವನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
ಮಹಾತ್ಮಗಾಂಧೀಜಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹಾಪುರುಷರೆಲ್ಲರೂ ಕೂಡ ಯೋಗ ಸಾಧಕರಾಗಿದ್ದರು. ಕ್ಯಾನ್ಸರ್, ಹೃದಯ ಸಂಬಂಧಿ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಯೋಗಾಭ್ಯಾಸದಿಂದ ಗುಣಮುಖವಾಗುವ ಸಾಧ್ಯತೆಗಳಿವೆ. ತಾವು 23ನೇ ವಯಸ್ಸಿನಲ್ಲಿ ಕಂಟ್ರಾಕ್ಟರ್ ಕೆಲಸ ಶುರು ಮಾಡಿದ್ದು, ಆಗ ಬೆಳಗ್ಗೆ 5ರಿಂದ ಸೈಕಲ್ ತುಳಿಯುತ್ತಿದ್ದೆ. 70ರಿಂದ 80 ಕಿ.ಮಿ. ಸೈಕಲ್ ತುಳಿಯುತ್ತಿದ್ದೆ. ಇದಕ್ಕಿಂತ ವ್ಯಾಯಾಮ ಬೇಕೆ ಎಂದು ಪ್ರಶ್ನಿಸಿದರು.

ಮೊದಲಿನಿಂದಲೂ ತಾವು ಶ್ರಮ ಜೀವಿಯಾಗಿದ್ದು, ಮಿತ ಆಹಾರ ಸೇವಿಸುವುದು ನಮ್ಮ ಆರೋಗ್ಯದ ಗುಟ್ಟು ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಯೋಗಕ್ಕೆ ಮೋದಿ ಅವರು ಹೊಸ ಸ್ವರೂಪ ನೀಡಿದ್ದಾರೆ. ಅನಾದಿಕಾಲದಿಂದಲೂ ಋಷಿ ಮುನಿಗಳು ತಮ್ಮ ಆರೋಗ್ಯವನ್ನು ಯೋಗ್ಯಾಭ್ಯಾಸದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರು 100, 200 ವರ್ಷಗಳ ಕಾಲ ದೀರ್ಘಾಯುಷಿಯಾಗಿ ಬದುಕುತ್ತಿದ್ದರು. ಈಗಲೂ ಮಹಾ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ ಎಂದು ತಿಳಿಸಿದರು.

ಛೇಂಬರ್ ಆಫ್ ಕಾಮರ್ಸ್‍ನವರು ಅರಮನೆ ಮೈದಾನದಲ್ಲಿ ಯೋಗ ದಿನಾಚರಣೆ ಮಾಡುತ್ತಿದ್ದು, ತಮಗೂ ಕೂಡ ಆಹ್ವಾನ ನೀಡಿದ್ದರು. ಅವರಿಗೆ ತಾವೇ ಯೋಗ ಮಾಡುವುದಾಗಿ ಹೇಳಿದ ಮೇಲೆ ಮತ್ತೆ ಅವರ ಆಹ್ವಾನಿಸಲು ಬರಲೇ ಇಲ್ಲ. ಮೋದಿ ಅವರಿಗೆ ಫಿಟ್‍ನೆಸ್ ಚಾಲೆಂಜ್ ಹಾಕುತ್ತೇನೆ ಎಂದು ಅನ್ನಿಸಿರಬಹುದು. ಆದರೆ, ತಾವು ಯಾರಿಗೂ ಚಾಲೆಂಜ್ ಹಾಕುವುದಿಲ್ಲ ಎಂದು ಯೋಗಾಭ್ಯಾಸ ಮಾಡುತ್ತಲೇ ಗೌಡರು ನುಡಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಗುರು ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಗೌಡರು, ಸರ್ವಾಂಗಾಸನ, ಹಲಾಸನ, ವೀರಾಸನಗಳನ್ನು ಮಾಡಿದರು.

ಇದೇ ಮೊದಲ ಬಾರಿಗೆ ಬಹಿರಂಗವಾಗಿ ಯೋಗ ಪ್ರದರ್ಶನ ಮಾಡಿದ ಗೌಡರು, ಮಾಧ್ಯಮದವರಿಗೆ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸಿದ್ದರು.
ಪ್ರಧಾನಿ ನರೇಂದ್ರ ಮೊದಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಫಿಟ್‍ನೆಸ್ ಚಾಲೆಂಜ್ ನೀಡಿದಾಗ ಕುಮಾರಸ್ವಾಮಿಯವರು ತಮ್ಮ ದೈಹಿಕ ಆರೋಗ್ಯಕ್ಕಿಂತ ರಾಜ್ಯದ ಆರೋಗ್ಯ ಕಾಪಾಡುವುದು ಮುಖ್ಯ ಎಂದು ಹೇಳಿದ್ದರು. ಆದರೆ, ಗೌಡರು ಸ್ವತಃ ಯೋಗಾಸನಗಳನ್ನು ಮಾಡುವ ಮೂಲಕ ಪ್ರಧಾನಿ ಅವರ ಸವಾಲಿಗೆ ಉತ್ತರ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ