ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತ

ದೊಡ್ಡಬಳ್ಳಾಪುರ, ಜೂ.14- ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-207ರ ಚಿಕ್ಕಬೆಳವಂಗಲ ಸಮೀಪದ ಕೋಲಿಗೆರೆ ಗ್ರಾಮದ ಬಳಿ ಸಂಭವಿಸಿದೆ.
ವಿಜಯ್‍ಕುಮಾರ್ (40) ಮೃತಪಟ್ಟ ವ್ಯಕ್ತಿ. ದಾಬಸ್‍ಪೇಟೆ-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಬಸ್‍ಪೇಟೆ ಕಡೆಯಿಂದ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಬುಲೆಟ್‍ನಲ್ಲಿ ಚಲಿಸುತ್ತಿದ್ದ ಸವಾರನ ಮೇಲೆ ಉರುಳಿ ಬಿದ್ದಿದೆ.
ಕಂಟೈನರ್ ಕೆಳಭಾಗದಲ್ಲಿ ಸಿಲುಕಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಹದಗೆಟ್ಟ ರಸ್ತೆಯಿಂದ ಮೇಲಿಂದ ಮೇಲೆ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲವೇ ಇವೆ. ಕಾಮಗಾರಿ ಅರ್ಧಕ್ಕೇ ನಿಂತಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಸಂಪೂರ್ಣವಾಗಿ ಕಾಮಗಾರಿ ಕೈಗೊಳ್ಳದೆ ರಸ್ತೆಯ ಅಲ್ಲಲ್ಲಿ ಅರ್ಧಂಬರ್ಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅರ್ಧಕ್ಕೇ ಬಿಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೊಡ್ಡಬೆಳವಂಗಲ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ