ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಕಂಟೈನರ್ ಲಾರಿ: ಬುಲೆಟ್ ಬೈಕ್ ಸಮೇತ ಕಂಟೈನರ್ ಕೆಳಗೆ ಸಿಲುಕಿ ಬೈಕ್ ಸವಾರ ಸಾವು

ಬೆಂಗಳೂರು:ಜೂ-14: ರಸ್ತೆ ಬದಿ ಸಾಗುತ್ತಿದ್ದ ಬೈಕ್ ಮೇಲೆ ಬೃಹತ್ ಗಾತ್ರದ ಕಂಟೈನರ್ ಲಾರಿ ಪಲ್ಟಿಯಾದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಲಿಗೆರೆ ಗ್ರಾಮದ ಬಳಿ ನಡೆದಿದೆ.

ಚಿಕ್ಕಬೆಳವಂಗಲ ಗ್ರಾಮದ ವಿಜಯ್ ಕುಮಾರ್ (40) ಮೃತ ಬೈಕ್ ಸವಾರ. ಅಂದ ಹಾಗೆ ಡಾಬಸ್ ಪೇಟೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ಮೃತ ವಿಜಯ್ ಕುಮಾರ್ ತನ್ನ ಬುಲೆಟ್ ಬೈಕ್ ನಲ್ಲಿ ಡಾಬಸ್ ಪೇಟೆ ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಡಾಬಸ್‌ಪೇಟೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಕಂಟೈನರ್ ಲಾರಿ ಕೋಲಿಗೆರೆ ಗೇಟ್ ಬಳಿ ರಸ್ತೆಯ ಗುಂಡಿ ತಪ್ಪಿಸಲು ಹೋದಾಗ,.. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಉರುಳಿಬಿದ್ದಿದೆ. ಈ ವೇಳೆ ಕಂಟೈನರ್ ಲಾರಿ ಬುಲೆಟ್ ಬೈಕ್ ಮೇಲೆಯೇ ಉರುಳಿಬಿದ್ದಿದ್ದು. ಬುಲೆಟ್ ಬೈಕ್ ಸಮೇತ ಬೈಕ್ ಸವಾರ ವಿಜಯ್ ಕುಮಾರ್ ಕಂಟೈನರ್ ಲಾರಿ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಬಂದ ದೊಡ್ಡ ಬೆಳವಂಗಲ ಪೊಲೀಸರು, ಹರಸಾಹಸ ಪಟ್ಟು ಕ್ರೇನ್ ಗಳ ಮುಖಾಂತರ ರಸ್ತೆ ಮಧ್ಯೆ ಉರುಳಿಬಿದ್ದಿದ್ದ ಕಂಟೈನರ್ ಲಾರಿಯನ್ನ ತೆರವುಗೊಳಿಸಿ, ಮೃತದೇಹವನ್ನ ಹೊರತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 207 ಆಗಿದ್ದು ಕಳೆದ 4 ವರ್ಷಗಳಿಂದಲೂ ಅಮೆಗತಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹಲವು ಕಡೆ ಭಾರೀ ಗಾತ್ರದ ಗುಂಡಿಗಳು ಬಿದ್ದಿವೆ, ಇನ್ನೂ ಇತ್ತೀಚಗೆ ಬಿದ್ದ ಮಳೆಯಿಂದ ಗುಂಡಿಗಳೆಲ್ಲಾ ಜಲಾವೃತವಾಗಿವೆ, ಹೀಗಾಗಿ ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಅಂತ ಸ್ಥಳೀಯ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ನಂತರ ಕಂಟೈನರ್ ಲಾರಿ ಚಾಲಕ ಪರಾರಿಯಾಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣಾ ಪೊಲೀಸರು ಲಾರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ